ಮೈಸೂರು : ರಾಜ ವಂಶಸ್ಥರ ಶರನ್ನವರಾತ್ರಿಯ ಪೂಜಾ ಕೈಂಕರ್ಯಕ್ಕೆ ಪೂರ್ವಭಾವಿಯಾಗಿ ಅರಮನೆಯ ಅಂಬಾವಿಲಾಸ ದರ್ಬಾರ್ ಹಾಲ್ನಲ್ಲಿ ರತ್ನ ಖಚಿತ ಸಿಂಹಾಸನವನ್ನು ಇಂದು ಬೆಳಗ್ಗೆ 10:05 ರಿಂದ 10:35ರ ಶುಭ ಲಗ್ನದಲ್ಲಿ ನುರಿತ ಅರಮನೆಯ ಕೆಲಸಗಾರರಿಂದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ಜೋಡಣೆ ಮಾಡಲಾಯಿತು.
ಅ. 15 ರಿಂದ ಅ. 48 ರ ವರೆಗೆ ಅರಮನೆಯಲ್ಲಿ ರಾಜ ಪರಂಪರೆಯಂತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶರನ್ನವರಾತ್ರಿಯ ಪೂಜಾ ಕೈಂಕರ್ಯಗಳನ್ನ ರಾಜ ಪರಂಪರೆಯಂತೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಶುಭ ಲಗ್ನದಲ್ಲಿ ಸಿಂಹಾಸನವನ್ನು ಅರಮನೆಯ ಅಂಬಾ ವಿಲಾಸ ದರ್ಬಾರ್ ಹಾಲ್ನಲ್ಲಿ ಜೋಡಿಸಲಾಯಿತು.
ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆ ಸಲ್ಲಿಸಿ ಅ. 15 ರಂದು ಭಾನುವಾರ ಬೆಳಗ್ಗೆ 6 ಗಂಟೆಯಿಂದ 6.25 ರ ಶುಭ ಮುಹೂರ್ತದಲ್ಲಿ ರತ್ನ ಖಚಿತ ಸಿಂಹಾಸನಕ್ಕೆ ಸಿಂಹ ಜೋಡಣೆ ಆಗುತ್ತದೆ. ಆನಂತರ ಅಂದು ಯಧುವೀರ್ ಹಾಗೂ ತ್ರಿಷಿಕಾ ಒಡೆಯರ್ಗೆ ಕಂಕಣ ಧಾರಣೆ ನಡೆಯುತ್ತದೆ. ಬಳಿಕ ಶರನ್ನವರಾತ್ರಿಯ ಪೂಜೆಗಳು ಆರಂಭವಾಗಿ ಅರಮನೆಯ ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸುಗಳು ಆಗಮಿಸುತ್ತವೆ. ಅ. 15ರ 10:25ಕ್ಕೆ ಸಿಂಹಾಸನ ಪೂಜೆ ನೆರವೇರಿಸಿ ಬಳಿಕ ರಾಜ ವಂಶಸ್ಥರ ರಾಜ ಪರಂಪರೆಯಂತೆ ಅಂದು ಖಾಸಗಿ ದರ್ಬಾರ್ ನಡೆಯಲಿದೆ. ಕೊನೆಗೆ, ಅ. 24ರ ವರೆಗೆ ಪ್ರತಿನಿತ್ಯ ಖಾಸಗಿ ದರ್ಬಾರ್ ನಡೆಸುವ ರಾಜ ವಂಶಸ್ಥರಾದ ಯಧುವೀರ್, ವಿಜಯದಶಮಿ ದಿನ ಸಂಜೆ ಕೊನೆಯ ದಿನದ ಖಾಸಗಿ ದರ್ಬಾರ್ ನಡೆಸಿ, ಸಿಂಹಾಸನದಿಂದ ಸಿಂಹ ವಿಸರ್ಜನೆ ಮಾಡಿ, ಶರನ್ನವರಾತ್ರಿಯ ಪೂಜೆಗಳನ್ನು ಕೊನೆಗೊಳಿಸುತ್ತಾರೆ.





