ಸುತ್ತೂರು : ಕೇವಲ 1 ಎಕರೆ ಪ್ರದೇಶದಲ್ಲಿ ಸುಮಾರು 102 ಮಾದರಿಯ ವಿವಿಧ ತಳಿಯ ಬೆಳೆಗಳನ್ನು ಬೆಳೆಯಬಹುದೆಂಬುದನ್ನು ಸಾಬೀತು ಪಡಿಸಲಾಗಿದೆ.
ಹೌದು ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಈ ಕೃಷಿ ಬ್ರಹ್ಮಾಂಡ ಬೆಳೆಗಳ ಪ್ರದರ್ಶನ ನಡೆದಿದ್ದು, ಇದನ್ನು ವೀಕ್ಷಿಸಿದ ಆಸಕ್ತರು ನಿಬ್ಬೆರಗಾಗಿದ್ದಾರೆ.
ಏಕದಳ ಬೆಳೆ, ಸಿರಿ ಧಾನ್ಯಗಳು, ದ್ವಿದಳ ಬೆಳೆ, ಎಣ್ಣೆ ಕಾಳು ಬೆಳೆ, ತರಕಾರಿ, ಸೊಪ್ಪುಗಳು, ಹೂವಿನ ಗಿಡಗಳು, ಹಣ್ಣಿನ ಬೆಳೆ, ತೋಟ ಪಟ್ಟಿ ಬೆಳೆ, ಔಷಧಿ, ಸುಗಂಧ ಸಸ್ಯ, ಮೇವಿನ ಬೆಳೆ, ರೇಷ್ಮೆ, ಬಹುಪಯೋಗಿ ಮರಗಳು, ಬೇಲಿ ಬೆಳೆಗಳು ಮತ್ತು ಪೂರಕ ಕಸುಬುಗಳ ಅವಶ್ಯಕತೆಗಳು ಈ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.

ನಂಜನಗೂಡು ತಾಲೂಕು ಸುತ್ತೂರು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಒಂದು ಎಕರೆ ಪ್ರದೇಶ ಭೂಮಿಯಲ್ಲಿ ಸುಮಾರು ನೂರ ಎರಡು ವಿವಿಧ ಬೆಳೆಗಳ ಪ್ರದರ್ಶನಕ್ಕೆ ಬೆಳೆದಿದ್ದು, ಅದರಲ್ಲೂ ವರ್ಷಪೂರ್ತಿ ಯಾವ ಕಾಲದಲ್ಲಾದರೂ ಬೆಳೆಯುವಂತ ರೋಗರಹಿತ ರಾಗಿ, ಜೋಳ, ಭತ, ಸಿರಿ ಧಾನ್ಯಗಳು, ವಿವಿಧ ತರಕಾರಿಗಳನ್ನು ಬೆಳೆದಿದ್ದು, ಈ ಬೆಳೆಗಳ ಬಗ್ಗೆ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶಾಮ್ ರಾಜ್ ಅವರು ಮಾಹಿತಿ ನೀಡಿದ್ದಾರೆ.
ಇಂತಹ ಬೆಳೆಗಳಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಾಗಲಿದ್ದು, ರೋಗ ರಹಿತ ರಾಗಿಯಂತಹ ಬೆಳೆಗಳನ್ನು ಎಕರೆಗೆ 10ರಿಂದ 12 ಕ್ವಿಂಟಾಲ್ ಬೆಳೆಯಬಹುದಾಗಿದೆ. 100 ರಿಂದ 102 ದಿನದೊಳಗೆ ಕಟಾವು ಸಹ ಮಾಡಬಹುದು. ಅಲ್ಲದೇ ಎಲ್ಲಾ ಸಮಯದಲ್ಲೂ ಅಂದರೆ ಹಿಂಗಾರು, ಮುಂಗಾರು, ಬೇಸಿಗೆ ಕಾಲ, ಚಳಿಗಾಲದಲ್ಲಿಯೂ ಈ ಆರೋಗ್ಯಕರ ಬೆಳೆಗಳನ್ನು ಬೆಳೆಯಬಹುದು.ಮತ್ತು ಉತ್ತಮ ಮೇವಿಗೂ ಇದು ಅನುಕೂಲಕರ ಎಂದರಲ್ಲದೇ, ಈ ಬೆಳೆಗಳಿಗೆ ಬೆಂಕಿರೋಗ, ಕುತ್ತಿಗೆ ರೋಗದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಮತ್ತು ತೆನೆ ತಿಗಣೆಯಂತಹ ಸಮಸ್ಯೆಯೂ ಉದ್ಭವಿಸಿವುದಿಲ್ಲ ಎಂದರು.

ಎಲ್ಲಕ್ಕಿಂತ ಮಿಗಿಲಾಗಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದಾದಂತಹ ಬೆಳೆಗಳು ಇದಾಗಿದ್ದು, ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಲಿದೆ.ರೈತರು ಈ ರೀತಿಯ ಅಂತರ್ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂಬುದು ನಮ್ಮ ಸಲಹೆ ಎಂದು ಅಭಿಪ್ರಾಯವನ್ನು ಹಂಚಿಕೊಂಡರು.
ಇನ್ನು ಹೆಚ್ಚಿನ ಮಾಹಿತಿಗಾಗಿ 9986269393 ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಚಿತ್ರ, ಮಾಹಿತಿ: ಸುತ್ತೂರು ನಂಜುಂಡನಾಯಕ





