ಮೈಸೂರು: ಮೈಸೂರು-ಚೆನ್ನೈ ನಡುವೆ ಶೀಘ್ರ ವಂದೇ ಭಾರತ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ.
ದಕ್ಷಿಣ ಭಾರತದಲ್ಲಿ ಅತೀ ವೇಗವಾಗಿ ಸಂಚರಿಸುವ ದೇಶದ ಮೊಟ್ಟ ಮೊದಲ ರೈಲು ಇದಾಗಿದ್ದು, ಗಂಟೆಗೆ ೭೪ ಕಿಮೀ ವೇಗದಲ್ಲಿ ಸಂಚರಿಸುವ ಈ ಎಕ್ಸ್ಪ್ರೆಸ್ ರೈಲು ಮೈಸೂರು-ಚೆನ್ನೈ ನಡುವಿನ ೪೯೭ ಕಿಮೀ ದೂರವನ್ನು ಕೇವಲ ೬ ಗಂಟೆ ೪೦ ನಿಮಿಷಗಳಲ್ಲಿ ಕ್ರಮಿಸಲಿದೆ.
ಚೆನ್ನೈ ಸೆಂಟ್ರಲ್-ಬೆಂಗಳೂರು ನಗರ-ಮೈಸೂರು ನಗರ ಜಂಕ್ಷನ್ ನಡುವೆ ಈ ಎಕ್ಸ್ಪ್ರೆಸ್ ರೈಲು ಸಂಚರಿಸಲಿದೆ. ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಬೆಳಿಗ್ಗೆ ೫.೫೦ಕ್ಕೆ ಹೊರಟು ಬೆಳಿಗ್ಗೆ ೧೦.೨೫ಕ್ಕೆ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣವನ್ನು ತಲುಪಲಿದೆ. ಬೆಳಿಗ್ಗೆ ೧೦.೩೦ಕ್ಕೆ ಕೆಎಸ್ಆರ್ ರೈಲು ನಿಲ್ದಾಣದಿಂದ ಹೊರಟು ಮಧ್ಯಾಹ್ನ ೧೨.೩೦ಕ್ಕೆ ಮೈಸೂರು ಜಂಕ್ಷನ್ ತಲುಪಲಿದೆ. ಮಧ್ಯಾಹ್ನ ೧.೦೫ಕ್ಕೆ ಮೈಸೂರು ಜಂಕ್ಷನ್ನಿಂದ ಹೊರಟು, ಮಧ್ಯಾಹ್ನ ೨.೫೫ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣ ತಲುಪಿ ೩ ಗಂಟೆಗೆ ಅಲ್ಲಿಂದ ಹೊರಟು ರಾತ್ರಿ ೭.೩೫ಕ್ಕೆ ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ತಲುಪಲಿದೆ. ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳ ಕಾಲ ಈ ರೈಲು ಸಂಚರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ ಎರಡನೇ ವಾರದಲ್ಲಿ ಈ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.