Mysore
19
scattered clouds

Social Media

ಮಂಗಳವಾರ, 03 ಫೆಬ್ರವರಿ 2026
Light
Dark

ಕಾರು ಹರಿಸಿ ಕೊಲೆ ಯತ್ನ : ದರ್ಶನ್ ನ್ಯಾಯಾಂಗ ಬಂಧನಕ್ಕೆ

ಮೈಸೂರು : ಮೂವರ ಮೇಲೆ ಕಾರು ಹರಿಸಿ, ಕೊಲೆಗೆ ಯತ್ನಿಸಿದ ಆರೋಪಿ ದರ್ಶನ್ (೨೪)ನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮತ್ತೊಂದೆಡೆ, ಈ ಕೃತ್ಯಕ್ಕೆ ಆರೋಪಿಯ ತಾಯಿಯೇ ಪ್ರಚೋದನೆ ನೀಡಿದ್ದಾರೆ ಎಂದು ಗಾಯಾಳು ಪ್ರಜ್ವಲ್ ತಂದೆಯಿಂದ ಆರೋಪ ಕೇಳಿಬಂದಿದೆ.

ಭಾನುವಾರ ತಡರಾತ್ರಿ ಜನತಾ ನಗರದ ಟೆಂಟ್ ಸರ್ಕಲ್ ಬಳಿ ಪ್ರಜ್ವಲ್, ರಾಹುಲ್, ಆನಂದ್ ಎಂಬವರ ಮೇಲೆ ಟಿ.ಕೆ. ಬಡಾವಣೆಯ ನಿವಾಸಿ ವಾಸುದೇವ್ ಅವರ ಮಗ ದರ್ಶನ (೨೪) ಕಾರು ಹರಿಸಿ, ಕೊಲೆಗೆ ಯತ್ನಿಸಿದ್ದ ಈ ಸಂಬಂಧ ಸೋಮವಾರ ಸಂಜೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದರ್ಶನ್ ಹೇಳಿಕೆ : ತಡರಾತ್ರಿಯಾಗಿದ್ದರಿಂದ ರಸ್ತೆಯಲ್ಲಿ ಯಾವುದೇ ವಾಹನಗಳು ಇರಲಿಲ್ಲ. ಹಾಗಾಗಿ, ನಾನು ವೇಗವಾಗಿ ಬಂದಿದ್ದು, ನಿಜ. ಆದರೆ, ದೂರುದಾರರು ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿಕೊಂಡು ಮಾತನಾಡುತ್ತಿದ್ದರು. ಆದರೂ, ಕಾರನ್ನು ನಿಯಂತ್ರಿಸಿದೆ. ಇವರು ಯಾಕೆ ಹೀಗೆ ಬಂದೆ ಎಂದು ನನ್ನ ಮೇಲೆ ಹಲ್ಲೆ ಮಾಡಲು ಬಂದರು. ಈ ಸಮಯದಲ್ಲಿ ನಮ್ಮ ತಂದೆ-ತಾಯಿ ತಪ್ಪಾಯಿತು ಎಂದು ಸಮಾಧಾನ ಮಾಡಿದರು. ನಂತರ ನಾನು ಬೇಕೆಂದು ಅವರ ಮೇಲೆ ಕಾರು ಹರಿಸಿಲ್ಲ. ಕಾರಿನದ್ದು ಆಟೋಮೆಟಿಕ್ ಗೇರ್ ಆಗಿದ್ದರಿಂದ ಮೊದಲ ಗೇರ್‌ನಲ್ಲಿ ಕಾರು ಜಂಪ್ ಮಾಡಿ, ಅವರಿಗೆ ಡಿಕ್ಕಿ ಹೊಡೆದಿದೆ. ಮತ್ತೆ ಅವರೆಲ್ಲಿ ಹೊಡೆಯಲು ಬರುತ್ತಾರೋ ಎಂದು ಕಾರನ್ನು ರಿವರ್ಸ್ ತೆಗೆದೆ ಎಂದು ವಿಚಾರಣೆ ವೇಳೆ ದರ್ಶನ್ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಇನ್ನು ಮೂವರು ಗಾಯಾಳುಗಳಿಗೂ ಚಿಕಿತ್ಸೆ ಮುಂದುವರಿದಿದೆ. ಪ್ರಜ್ವಲ್ ಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸರ್ಜರಿಯಾಗಿಲ್ಲ. ರಾಹುಲ್‌ಗೆ ಸರ್ಜರಿ ಆಗಿ ಐಸಿಯುನಲ್ಲಿ ಇದ್ದಾರೆ. ಆನಂದ್ ಎಂಬಾತನಿಗೂ ಸರ್ಜರಿಯಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪ್ರಜ್ವಲ್ ಕುಟುಂಬದ ಮೂಲಗಳು ತಿಳಿಸಿವೆ.

ಆರೋಪಿಯ ತಾಯಿಯಿಂದಲೇ ಪ್ರಚೋದನೆ: ಆರೋಪ

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಹರಿಸಲು ಕಾರಿನಲ್ಲಿ ಇದ್ದ ಆರೋಪಿ ದರ್ಶನ್ ತಾಯಿ ಪ್ರಚೋದನೆ ನೀಡಿದ್ದಾರೆ. ಆದರೆ, ಗಾಯಾಳುವಿನ ಹೇಳಿಕೆ ಪಡೆದು ಎಫ್‌ಐಆರ್ ಮಾಡಿರುವವರು ಇದನ್ನು ಸೇರಿಸಿಲ್ಲ. ಬದಲಾಗಿ, ತಂದೆ-ತಾಯಿಯೇ ಸಮಾಧಾನ ಮಾಡಿದರು ಎಂದು ಸೇರಿಸಿದ್ದಾರೆ. ಆರೋಪಿಯ ತಂದೆ-ತಾಯಿಗಳು ಮಾನವೀಯತೆಯಿಂದಲೂ ಬಂದು ಗಾಯಾಳುಗಳ ಆರೋಗ್ಯ ವಿಚಾರಿಸಿಲ್ಲ ಎಂದು ಪ್ರಜ್ವಲ್ ತಂದೆ ನಾಗರಾಜು ಆರೋಪಿಸಿದ್ದು, ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ಮಾಡಿ, ನ್ಯಾಯ ಒದಗಿಸುವಂತೆ ಕೋರಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!