Mysore
20
overcast clouds
Light
Dark

ಜಂಬೂಸವಾರಿಯಲ್ಲಿ ಕಂಗೊಳಿಸಲಿವೆ ಮೈಸೂರಿನ ವಿಶಿಷ್ಟತೆ


ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಸಿದ್ಧತೆ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಜಂಬೂಸವಾರಿಯ ಮತ್ತೊಂದು ಆಕರ್ಷಣೆ ಸ್ಥಬ್ಧ ಚಿತ್ರಗಳ ಮೆರವಣಿಗೆಗೂ ಸಕಲ ಸಿದ್ಧತೆಗಳೂ ನಡೆಯುತ್ತಿವೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ 75 ವರ್ಷಗಳಲ್ಲಿ ಮಾಡಿರುವ ಸಾಧನೆಯ ವಿಶೇಷತೆ ಪ್ರದರ್ಶನಗಳು, ಹುಲಿ ಅಭಯಾರಣ್ಯ ಪ್ರದೇಶ ,ಪ್ರಮುಖ ದೇವಾಲಯಗಳ ಪ್ರದರ್ಶನ ಇನ್ನು ಹಲವು ವಿಶೇಷ ಸ್ಥಬ್ದ ಚಿತ್ರಗಳು ಈ ಬಾರಿ ದಸರಾಗೆ ಇನ್ನಷ್ಟು ಹೆಚ್ಚು ಮೆರುಗು ತರಲಿವೆ.

ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಪಂಚಾಯಿತಿ ಸಿಇಓ ಗಳಿಗೆ ತಮ್ಮ ಜಿಲ್ಲೆಯ ವಿಶೇಷವಾದ ಮಾದರಿ ರೂಪಿಸಬೇಕೆಂದು ಜಿಲ್ಲಾಡಳಿತ ವತಿಯಿಂದ ಈಗಾಗಲೇ ಪತ್ರ ವ್ಯವಹಾರ ಮಾಡಿದ್ದು ಕಳೆದ ವರ್ಷಕ್ಕಿಂತ ಭಿನ್ನವಾಗಿ ಸ್ತಬ್ಧ ಚಿತ್ರಗಳು ರೂಪಿಸಬೇಕೆಂದು ಸೂಚನೆ ನೀಡಲಾಗಿದೆ. ಎಲ್ಲ ಜಿಪಂಗಳು ತಮ್ಮ ಸ್ತಬ್ದ ಚಿತ್ರದ ಮಾದರಿಯನ್ನು ಕಳುಹಿಸಿಕೊಟ್ಟಿದ್ದು ಬಂಡೀಪಾಳ್ಯದ ಎಪಿಎಂಸಿ ಆವರಣದಲ್ಲಿ ಈಗಾಗಲೇ ಸ್ತಬ್ದಚಿತ್ರ ತಯಾರಿ ಕಾರ್ಯ ಪ್ರಗತಿಯಲ್ಲಿದೆ.
ದೇಶ ವಿದೇಶಗಳಲ್ಲಿ ಗಮನ ಸೆಳೆದಿರುವ ಮೈಸೂರಿನ ವಿಶೇಷತೆಯನ್ನು ಈ ಬಾರಿ ಯ ಸ್ತಬ್ಧಚಿತ್ರಗಳು ಅನಾವರಣಗೊಳಿಸಲಿವೆ. ಅರಮನೆ, ಪಾರಂಪರಿಕ ಕಟ್ಟಡ, ದೇವಾಲಯಗಳು, ಮೈಸೂರು ರೇಷ್ಮೆ, ನಂಜನಗೂಡು ರಸಬಾಳೆ, ಮೈಸೂರು ಪೇಟ ಹೀಗೆ ಭೌಗೋಳಿಕ ಅನನ್ಯತೆ ಪಟ್ಟಿಯಲ್ಲಿರುವ ಮೈಸೂರಿನ ವಿಶೇಷತೆಗಳು ಸ್ತಬ್ಧಚಿತ್ರ ರೂಪದಲ್ಲಿ ಅನಾವರಣಗೊಂಡು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲ್ಲಿವೆ.
ನಾಡಿನ ವಿವಿಧ ಕಲಾ ತಂಡಗಳು ಹಾಗೂ ವಿವಿಧ ಸಾಂಸ್ಕ್ರತಿಕ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲ್ಲಿದ್ದು, ಮೆರವಣಿಗೆಯಲ್ಲಿ ಜನರ ಮನಸೂರೆಗೊಳಿಸುವ ಸ್ತಬ್ಧ ಚಿತ್ರಗಳೂ ಕೂಡ ಪಾಲ್ಗೊಳ್ಳಲ್ಲಿವೆ. ಜಂಬೂ ಸವಾರಿ ಅಂಬಾರಿ ಆನೆಗಳ ಜತೆ ಹೆಜ್ಜೆ ಹಾಕಲು ಸ್ಥಬ್ಧಚಿತ್ರಗಳು ತಯಾರಾಗಿದ್ದು, ವಿವಿಧ ಜಿಲ್ಲೆಗಳ ಸುಮಾರು 40ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಈ ಬಾರಿ ವಿಶೇಷವಾಗಿ ಹುಲಿ ಸಂತತಿ ,ಆನೆಗಳ ಸಂತತಿ, ಬಿಳಿಗಿರಿ ರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟ, ಬಂಡೀಪುರದ ರಮಣೀಯ ಪ್ರದರ್ಶನದಿಂದ ಕೂಡಿದೆ. ಕೊಡಗು ಜಿಲ್ಲೆಯ ಪ್ರವಾಸೋದ್ಯಮ ತಾಣಗಳನ್ನು ಪರಿಚಯಿಸುವಂತೆ ಮಾಡಲಾಗುತ್ತಿದೆ ಮಂಡ್ಯ ಜಿಲ್ಲೆಯ ಮೇಲುಕೋಟೆ ಸೇರಿದಂತೆ ಐತಿಹಾಸಿಕ ಸ್ಥಳಗಳ ಮಹಿಮೆಯನ್ನು ನೋಡುವ ರೀತಿ ಮಾಡಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿ ಕುರಿತಂತೆ ಅನಾವರಣಗೊಳ್ಳಲಿದೆ. ಅದೇ ರೀತಿ ಪ್ರತಿಯೊಂದು ಜಿಲ್ಲೆಯ ವಿಶೇಷತೆ, ಭೌಗೋಳಿಕ ವಿಶೇಷತೆ ಇರುವ ಪರಂಪರೆಯನ್ನು ಬಿಂಬಿಸುವಂತಹ ಸ್ಥಬ್ಥಚಿತ್ರಗಳು ತಯಾರಾಗಲಿವೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ