ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನಲ್ಲಿ ಗೋಶಾಲೆ ತೆರೆಯದೆ ೪ ಕೋಟಿ ರೂ. ದುರುಪಯೋಗ ಮಾಡಿಕೊಂಡ ಅಂದಿನ ತಹಶೀಲ್ದಾರ್ ಕಾಮಾಕ್ಷಮ್ಮ ಅವರ ವಿರುದ್ದ ಕ್ರಮ ಕೈಗೊಳ್ಳದೆ ವಿಳಂಬ ಮಾಡಲಾಗುತ್ತಿದೆ ಎಂದು ಆರ್ಟಿಐ ಕಾರ್ಯಕರ್ತ ಆರ್.ಗೋವಿಂದರಾಜ್ ಆರೋಪಿಸಿದ್ದಾರೆ.
೨೦೧೬ ರಿಂದ ೨೦೧೭-೧೮ನೇ ಸಾಲಿನಲ್ಲಿ ಜಿಲ್ಲೆಯಲ್ಲೂ ಮಳೆಯಾಗದೆ ಬರ ಪರಿಸ್ಥಿತಿಯಿತ್ತು. ಆಗ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಗೋಶಾಲೆ ತೆರೆಯಲು, ಮೇವು ನಿಧಿ ಸ್ಥಾಪಿಸಲು ಮತ್ತು ಕುಡಿಯುವ ನೀರು ಪೂರೈಕೆ ರಾಜ್ಯ ಸರ್ಕಾರ ೪ ಕೋಟಿ ರೂ. ನೀಡಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಮಾಕ್ಷಮ್ಮ ಅವರು ಒಂದು ಗೋಶಾಲೆ ತೆರೆಯಲಿಲ್ಲ. ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದರು. ಈ ಬಗ್ಗೆ ೨೦೨೧ರ ನವೆಂಬರ್ ೩೦ ರಂದು ಸೂಕ್ತ ದಾಖಲೆಗಳ ಜೊತೆ ಉಪ ವಿಭಾಗಾಧಿಕಾರಿಗಳಿಗೆ ದೂರು ನೀಡಲಾಗಿತ್ತು ಎಂದರು.
ಈ ಕುರಿತು ತನಿಖೆ ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿಗಳು ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಸಲ್ಲಿಸಿದ್ದರು. ಇಲ್ಲಿಯ ತನಕ ಯಾವುದೇ ಕ್ರಮ ವಹಿಸಿಲ್ಲ. ಈಗ ಕಾಮಾಕ್ಷಮ್ಮ ನಿವೃತ್ತರಾಗಿದ್ದಾರೆ. ಇನ್ನಾದರೂ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ದಸಂಸ ಮುಖಂಡರಾದ ಚಂದ್ರಶೇಖರ್, ಮಹೇಶ್, ಶ್ರೇಯಸ್ ಹಾಜರಿದ್ದರು.




