Mysore
14
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಶಾಸಕರಿಂದ ಕ್ವಾರಿ ಖರೀದಿ; ಬಾಕಿ ಹಣ ನೀಡದೆ ವಂಚನೆ

 ಕ್ವಾರಿ ಮಾಲೀಕ ಕಮಲೇಶ್ ಕುಮಾರ್ ಆರೋಪ

ಚಾಮರಾಜನಗರ: ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನನಗೆ ಸೇರಿದ ಕಪ್ಪುಕಲ್ಲು ಕ್ವಾರಿ ಖರೀದಿಸಿ ಬಾಕಿ ಹಣ ೯ ಕೋಟಿ ರೂ.ನೀಡದೆ ವಂಚಿಸಲು ಮುಂದಾಗಿದ್ದಾರೆ ಎಂದು ಗುಜರಾತ್ ಮೂಲದ ಡಾ.ಕಮಲೇಶ್‌ಕುಮಾರ್ ಆರೋಪಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಸರ್ವೆ ನಂ. ೩೩೫/೧, ೩೩೬/೪, ೩೩೬/೬ ಹಾಗೂ ೩೩೯/೧ರಲ್ಲಿ ೪ ಎಕರೆ ೩೩ ಗುಂಟೆಯಲ್ಲಿ ನಡೆಯುತ್ತಿದ್ದ ಕಪ್ಪುಕಲ್ಲು ಕ್ವಾರಿಯನ್ನು ಹಿತೇಂದ್ರಜೋಶಿ ಎಂಬುವರಿಂದ ನಾನು ಖರೀದಿಸಿದ್ದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕ್ವಾರಿಗೆ ಹೊಂದಿಕೊಂಡಂತಿದ್ದ ಸರ್ವೆ ೩೩೭ರಲ್ಲಿ ೪ ಎಕರೆ ೧ ಗುಂಟೆ ಭೂಮಿಯನ್ನು ಖರೀದಿಸಿದ್ದೇನೆ. ಈ ಭೂಮಿಯಲ್ಲಿ ನಾನು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ೨೦೨೧ ನವೆಂಬರ್‌ವರಗೆ ಗಣಿಗಾರಿಕೆ ನಡೆಸಿದ್ದೇನೆ ಎಂದು ತಿಳಿಸಿದರು.
೨೦೨೧ ಅಕ್ಟೋಬರ್‌ನಲ್ಲಿ ಸ್ಥಳೀಯರು ಕಿರಿಕಿರಿ ಮಾಡಿದರು. ಇದನ್ನು ಸರಿಪಡಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದ್ದೆ. ನೀವು ಹೊರ ರಾಜ್ಯದವರು ಹಾಗಾಗಿ ಸ್ಥಳೀಯರು ಗಣಿಗಾರಿಕೆ ನಡೆಸಲು ಬಿಡುವುದಿಲ್ಲ. ಆ ಕ್ವಾರೆಯನ್ನು ನನಗೆ ಮಾರಾಟ ಮಾಡುವಂತೆ ಶಾಸಕರು ಸೂಚಿಸಿದರು ಎಂದು ಆರೋಪಿಸಿದರು.
ನಾನು ಒಪ್ಪಿಕೊಂಡು ೧೪ ಕೋಟಿ ರೂ.ಗೆ ಕ್ರಯ ಒಪ್ಪಂದ ಮಾಡಿಕೊಂಡು ಮುಂಗಡವಾಗಿ ಶಾಸಕರಿಂದ ೧ ಲಕ್ಷ ರೂ. ಪಡೆದಿದ್ದೇನೆ. ನಂತರ ಕ್ವಾರಿ ಕ್ರಯ ಮಾಡಿಕೊಡುವಂತೆ ನನ್ನನು ಕರೆದರು. ಆ ದಿನ ನನ್ನನ್ನು ಹೆದರಿಸಿ ೧೪ ಕೋಟಿ ರೂ. ನೀಡಲು ಸಾಧ್ಯವಿಲ್ಲವೆಂದು ಧಮಕಿ ಹಾಕಿದರು ಎಂದು ಆಪಾದಿಸಿದರು.
ಬಳಿಕ ಕ್ವಾರಿಯನ್ನು ೧೨.೫೦ ಕೋಟಿ ರೂ.ಗೆ ಕ್ರಯದ ಅಗ್ರಿಮೆಂಟ್ ಮಾಡಿದಾಗ ಶಾಸಕರ ವೈಯುಕ್ತಿಕ ಬ್ಯಾಂಕ್ ಖಾತೆಯಿಂದ ನನಗೆ ೧ ಕೋಟಿ ರೂ. ಬಂದಿದೆ. ನಂತರದ ಪ್ರಕ್ರಿಯೆಯನ್ನು ಮಾಡದೆ ಕ್ವಾರಿ ಆರಂಭಿಸಿದರು. ಇದನ್ನು ಪ್ರಶ್ನಿಸಿದ ನನಗೆ ಕೊಲೆ ಬೆದರಿಕೆ ಹಾಕಿಸಿದ್ದಾರೆ. ಈ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಕ್ವಾರಿ ನಿಲ್ಲಿಸಿದ್ದಾರೆ ಎಂದು ದೂರಿದರು.
೧ ಕೋಟಿ ಜೊತೆಗೆ ೨.೫೪ ಲಕ್ಷ ರೂ. ೨೦೨೨ರ ಮಾರ್ಚ್ನಲ್ಲಿ ನನಗೆ ಸಂದಾಯವಾಗಿದೆ. ಶಾಸಕರು ಬಾಕಿ ೯ ಕೋಟಿ ರೂ. ವಂಚಿಸಲು ಯತ್ನಿಸಿದ್ದಾರೆ. ಅವರ ಅಳಿಯ ಬೆದರಿಕೆ ಹಾಕಿರುವ ೫೭೧ ಕರೆಗಳ ಧ್ವನಿಮುದ್ರಿಕೆ ನನ್ನ ಬಳಿಯಿದೆ. ಶಾಸಕರ ವಿರುದ್ದ ಪ್ರಧಾನಿ, ಗೃಹ ಸಚಿವರು ಹಾಗೂ ಸಂಬಂಧಪಟ್ಟ ಎಲ್ಲರಿಗೂ ದೂರು ಸಲ್ಲಿಸುತ್ತೇನೆ ಎಂದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!