ಮೈಸೂರು : ಹಳೆ ಕೆಸರೆ ಗ್ರಾಮದಲ್ಲಿ ಪ್ರಾರಂಭವಾಗಿರುವ ಕಸ ವಿಲೇವಾರಿ ಘಟಕವನ್ನು ಕೂಡಲೇ ಬೇರೆಡೆಗೆ ಸ್ಥಳಾಂತರ ಮಾಡುವಂತೆ ಶಾಸಕ ಜಿ.ಟಿ.ದೇವೇಗೌಡ ಸೂಚಿಸಿದರು.
ನಗರದ ಜಲದರ್ಶಿನಿಯ ಶಾಸಕರ ಕಛೇರಿಯಲ್ಲಿ ನಡೆದ ಬಜೆಟ್ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ಹಳೆ ಕೆಸರೆ, ಕಾಮನಕೆರೆಹುಂಡಿ ಗ್ರಾಮದ ನಿವಾಸಿಗಳು ಹಾಗೂ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಈಗಾಗಲೇ ಪ್ರತಿಭಟನೆ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು, ಹೂಟಗಳ್ಳಿ ನಗರಸಭೆಯ ಪೌರಾಯುಕ್ತರು, ರಮ್ಮನಹಳ್ಳಿ, ಶ್ರೀರಾಂಪುರ, ಬೊಗಾದಿ ಮತ್ತು ಕಡಕೊಳ ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳೊಡನೆ ಬಜೆಟ್ ಪೂರ್ವಬಾವಿ ಸಭೆಯನ್ನು ನಡೆಸಿ ಮಾತನಾಡಿದರು.
ಬೇಸಿಗೆ ಪ್ರಾರಂಭವಾಗುತ್ತಿದ್ದು, ಎಲ್ಲಿಯು ನೀರಿನ ಸಮಸ್ಯೆ ಉದ್ಬವಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ಕಬಿನಿಯಿಂದ ತಳೂರು ಯೋಜನೆಗೆ ಹೆಚ್ಚುವರಿ ನೀರು ನೀಡುವಂತೆ ತಿಳಿಸಿದರು.
ವಿಜಯನಗರ ೩ನೇ ಹಂತದಲ್ಲಿ ಅಂಗಡಿ, ಹೋಟಲ್ಗಳಿಗೆ ಪರವಾನಿಗೆ ಇಲ್ಲದೆ ಪ್ರಾರಂಭ ಮಾಡುತ್ತಿರುವುದಾಗಿ ದೂರುಗಳು ಬಂದಿದ್ದು, ಎಲ್ಲಾ ಅಂಗಡಿ, ಹೋಟಲ್ಗಳಿಗೆ ಪರವಾನಿಗೆ ನೀಡುವ ಬಗ್ಗೆ, ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಒಳಚರಂಡಿ ನೀರು, ಮಳೆ ನೀರುಚರಂಡಿಯಲ್ಲಿ ಹರಿಯುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು. ಖಾಸಗಿ ಬಡಾವಣೆಗಳನ್ನು ಹಸ್ತಾಂತರ ಮಾಡಿಕೊಳ್ಳುವಾಗ ಬಡಾವಣೆಗಳಲ್ಲಿ ಜಂಟಿ ಸಮೀಕ್ಷೆ ನಡೆಸಿ, ಯಾವ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂಬುದುರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಈ ಸ್ವತ್ತನ್ನು ಕೂಡಲೇ ನೀಡುವಂತೆ ಹಾಗೂ ಪಾಲಿಕೆ, ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಅನುದಾನವನ್ನು ಮೀಸಲಿಡುವಂತೆ ಸೂಚಿಸಿದರು.
ಸಭೆಯಲ್ಲಿ ಮುಖಂಡರಾದ ಹೆಚ್.ಸಿ.ರಾಜು, ಹೂಟಗಳ್ಳಿ ಸುರೇಶ್, ಮಹೇಶ್ ಸೇರಿದಂತೆ, ಪಾಲಿಕೆ ಆಯುಕ್ತರಾದ ಅಸಾದ್ ಉರ್ ರೆಹಮಾನ್ ಷರಿಫ್, ಪಿ.ಡಿ. ಶುಭ, ಅಧೀಕ್ಷಕ ಅಭಿಯಂತರರಾದ ಸಿಂಧು, ಪೌರಾಯುಕ್ತ ಸಂದೀಪ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಬಸವರಾಜು, ಶ್ರೀಧರ್, ನರಸಿಂಹಮೂರ್ತಿ, ದೀಪಾ ಹಾಜರಿದ್ದರು.





