Mysore
19
scattered clouds
Light
Dark

ಕೆಆರ್‌ಎಸ್‌ನಿಂದ ನೀರು ಬಿಟ್ಟ ಮರುದಿನವೇ ವಿಸಿ ನಾಲೆಯಲ್ಲಿ ದುರಂತ

ಮಂಡ್ಯ: ಮಂಡ್ಯ ತಾಲ್ಲೂಕಿನ ಹೊನಗನಹಳ್ಳಿ ಮಠ ಗ್ರಾಮದಲ್ಲಿ ಆಟವಾಡುತ್ತಿದ್ದ ವೇಳೆಯಲ್ಲಿ ವಿಶ್ವೇಶ್ವರಯ್ಯ ನಾಲೆಯಲ್ಲಿ 4 ವರ್ಷದ ಮಗುವೊಂದು ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ.

ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಕೆಆರ್‌ಎಸ್‌ ಜಲಾಶಯ. ಕಳೆದ ಬಾರಿ ಜಲಾಶಯ ಭರ್ತಿಯಾಗದ ಹಿನ್ನೆಲೆಯಲ್ಲಿ ವಿಸಿ ನಾಲೆಗಳಿಗೆ ನೀರನ್ನು ಬಿಟ್ಟಿರಲಿಲ್ಲ. ಹೀಗಾಗಿ ಬೇಸಿಗೆ ಬೆಳೆಯನ್ನು ರೈತರು ಬೆಳೆದಿರಲಿಲ್ಲ. ಆದರೆ, ಈ ಬಾರಿ ಜಲಾಶಯದಲ್ಲಿ ನೂರು ಅಡಿಗೂ ಹೆಚ್ಚು ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ನಿನ್ನೆಯಿಂದ ನಾಲೆಗಳಿಗೆ ನೀರನ್ನು ಬಿಡಲಾಗಿದೆ. ಆದರೆ, ನೀರು ಬಿಟ್ಟ ಮಾರನೇ ದಿನವೇ ವಿಸಿ ನಾಲೆಗೆ ಬಿದ್ದು ಮಗುವೊಂದು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ರಾಜು ಹಾಗೂ ಕಸ್ತೂರಿ ದಂಪತಿಯ ಪುತ್ರ ಸಬಿನ್‌ ಅಂಗನವಾಡಿಯಿಂದ ಬಂದು ಮನೆ ಬಳಿಯೇ ಆಟವಾಡುತ್ತಿದ್ದ. ಆದರೆ ಮಧ್ಯಾಹ್ನ 2.30ರಿಂದ ನಾಪತ್ತೆಯಾಗಿದ್ದಾನೆ. ಕೂಡಲೇ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆ ಪಕ್ಕದಲ್ಲೇ ಇರುವ ವಿಶ್ವೇಶ್ವರಯ್ಯ ನಾಲೆ ಬಳಿ ಸಬಿನ್‌ ಚಪ್ಪಲಿ ಪತ್ತೆಯಾಗಿದೆ.

ಇನ್ನು ಆಟವಾಡುತ್ತಾ ಹೋಗಿ ಆಯತಪ್ಪಿ ವಿಶ್ವೇಶ್ವರಯ್ಯ ನಾಲೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಗ್ರಾಮಸ್ಥರು, ಕುಟುಂಬ ಸದಸ್ಯರು ಸೇರಿಕೊಂಡು ಮಗು ಸಬಿನ್‌ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.