Mysore
19
few clouds
Light
Dark

ಉತ್ತಮ ಮನುಷ್ಯರನ್ನು ರೂಪಿಸುವ ಶಿಕ್ಷಕರು: ಶಾಸಕ ಪಿ.ರವಿಕುಮಾರ

ಮಂಡ್ಯ: ಸಮಾಜ ರೂಪುಗೊಳ್ಳುವಲ್ಲಿ ಉತ್ತಮ ಮನುಷ್ಯರ ಪಾತ್ರ ಅಪಾರ. ಹೀಗಾಗಿ, ಅಂತಹ ಉತ್ತಮರನ್ನು ರೂಪಿಸರುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಪಿ.ರವಿಕುಮಾರ್‌ ಹೇಳಿದರು.

ಅವರು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ – 2024 ರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಹಾಗೂ ನಿವೃತ್ತ ಶಿಕ್ಷಕರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ದೇಶದ ದೊಡ್ಡ ವಿದ್ವಾಂಸ ಹಾಗೂ ತತ್ವಜ್ಞಾನಿ ಆಗಿದ್ದರು. ಶಿಕ್ಷಕರ ಬಗ್ಗೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡಿದ್ದರು ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿ ಎಂದು ತಿಳಿಸಿದ ಮಹಾನ್ ವ್ಯಕ್ತಿತ್ವ ಅವರದ್ದಾಗಿದೆ  ಎಂದರು.

ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಶಿಕ್ಷಕರ ಆತ್ಮ ಗೌರವಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಂತ ವ್ಯಕ್ತಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರು ಎಂದು ಹೇಳಿದರು.

ಪ್ರತಿ ಮಕ್ಕಳ ಎರಡನೇ ತಾಯಿಯಾಗಿ, ಗುರುವಾಗಿ ತಿದ್ದುತ್ತಿರುವ ಹಾಗೂ ಮಕ್ಕಳ ಜೀವನದ ಬಾಳಿಗೆ ಬೆಳಕಾಗಿ, ಯಾವುದೇ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಳ್ಳದೇ ಸಮಾಜದಲ್ಲಿ ಒಬ್ಬ ಉತ್ತಮ ಮನುಷ್ಯನನ್ನಾಗಿ ರೂಪಿಸುತ್ತಿರುವವರು ಎಂದರೆ ಶಿಕ್ಷಕರು ಮಾತ್ರ. ಆದ್ದರಿಂದ ಇಡೀ ಭಾರತ ದೇಶವು ಶಿಕ್ಷಕರ ದಿನವನ್ನು ಆಚರಿಸುತ್ತಿದ್ದು, ಇಡೀ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎಂದು ತಿಳಿಸಿದರು.

ಶಿಕ್ಷಕರ ವೃತ್ತಿಯು ಒಂದು ದೊಡ್ಡ ಕುಟುಂಬವಾಗಿದ್ದು, ಇಡೀ ರಾಜ್ಯದಲ್ಲಿ ಎರಡೂವರೆ ಲಕ್ಷ ಶಿಕ್ಷಕರಿದ್ದಾರೆ. ಸರ್ಕಾರ ಕೂಡ ಶಿಕ್ಷಕರ ಆಗು – ಹೋಗುಗಳ ಜೊತೆಗೆ ಬೆಂಬಲವಾಗಿ ನಿಂತಿದೆ.

ಶಿಕ್ಷಕರ ಸಂಘದ ಅಧ್ಯಕ್ಷರಾದ ನಾಗೇಶ್ ಗೌಡ ರವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ 3 ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದಾರೆ. ಸರ್ಕಾರದ ಯೋಜನೆಗಳಾದ 5 ಗ್ಯಾರಂಟಿಗಳು ಹೇಗೆ ಚಾಲ್ತಿಯಲ್ಲಿದೆ, ಹಾಗೆಯೇ ಶಿಕ್ಷಕರ ಮೂರು ಬೇಡಿಕೆಗಳನ್ನು ಸರ್ಕಾರ ಜಾರಿಗೆ ತರುತ್ತದೆ. ಅದರಲ್ಲಿ ಯಾವ ಸಂಶಯವು ಬೇಡ ನೀವು ಸರ್ಕಾರದ ಮೇಲೆ ನಂಬಿಕೆ ಇಟ್ಟು ಮಕ್ಕಳಿಗೆ ಒಳ್ಳೆಯ ವಿದ್ಯಾಬ್ಯಾಸ ನೀಡಿ ಮಕ್ಕಳನ್ನು ಭಾರತ ದೇಶದ ವೀರ ಯೋದರನ್ನಾಗಿ ಮಾಡಿ ಎಂದು ಹೇಳಿದರು.

ಸಮಾಜದ ಪರಿವರ್ತನೆ ಶಿಕ್ಷಕರಿಂದ ಮಾತ್ರ ಸಾಧ್ಯ: ಡಾ ಕುಮಾರ

ಸಮಾಜದಲ್ಲಿ ಉತ್ತಮ ಹಾಗೂ ಆದರ್ಶ ಪ್ರಜೆಗಳನ್ನು ರೂಪಿಸುವವರು ಶಿಕ್ಷಕರಾಗಿದ್ದು, ಇಡೀ ಸಮಾಜದಲ್ಲಿ ಉತ್ತಮ ಪರಿವರ್ತನೆ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.

ತಂದೆ, ತಾಯಿ, ಗುರುಗಳು ಈ ಮೂವರಿಗಿಂತ ಮಿಗಿಲಾದ ವ್ಯಕ್ತಿಗಳಿಲ್ಲ. ಪ್ರತಿಯೊಬ್ಬರೂ ತಮ್ಮ ತಂದೆ, ತಾಯಿಯನ್ನು ಬಿಟ್ಟರೆ ಶಿಕ್ಷಕರಿಗೆ ಮಾತ್ರ ಪೂಜ್ಯಸ್ಥಾನ ನೀಡುತ್ತಾರೆ ಎಂದರು.

ಪ್ರತಿಯೊಬ್ಬ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಾತ್ಮಕ ಪಾಠವನ್ನು ಬೋಧಿಸುವ ಮೂಲಕ ಮೌಲ್ಯಯುತ ಶಿಕ್ಷಣವನ್ನು ನೀಡುವರು. ಗುರುವಿನ ಸ್ಥಾನಕ್ಕೆ ಅದರದ್ದೇ ಆದ ಮಹತ್ವವಿದೆ ಎಂದರು.

ಇಂದು ಡಾ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇಂದು ಅವರು ನಮ್ಮ ಜೊತೆ ಇಲ್ಲ. ಆದರೆ ಅವರು ಹಾಕಿಕೊಟ್ಟಿರುವಂತಹ ಮೌಲ್ಯಗಳು, ಆದರ್ಶ ಚಿಂತನೆಗಳು ನಮ್ಮ ಜೊತೆಗಿವೆ. ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಕೇವಲ ಒಂದು ದಿನದ ಹಬ್ಬವಲ್ಲ. ಪ್ರತಿಯೊಬ್ಬ ಶಿಕ್ಷಕರು ಡಾ ರಾಧಾಕೃಷ್ಣನ್ ಅವರ ಆದರ್ಶ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಆದರ್ಶ ಶಿಕ್ಷಕರಾಗಬೇಕು ಎಂದರು.

ಶಿಕ್ಷಕ ಎಂಬ ಮೂರು ಅಕ್ಷರಗಳುಳ್ಳ ಒಂದು ಪದವು ಇಡೀ ಲೋಕದ ವಿದ್ಯಾರ್ಥಿಗಳ ಜೀವನವನ್ನು ಬೆಳಗಿಸುವುದು‌ ಪ್ರತಿಯೊಬ್ಬ ವಿದ್ಯಾರ್ಥಿಗಳ ಕೈ ಹಿಡಿದು ಎತ್ತುವ ಸಾಮರ್ಥ್ಯ ಇರುವುದು ಶಿಕ್ಷಕರಿಗೆ ಮಾತ್ರ ಎಂದರು.

ಅನ್ಯ ಕ್ಷೇತ್ರದಲ್ಲಿ ತಪ್ಪು ಮಾಡಿದರೆ ಅದನ್ನು ಪುಣ್ಯ ಕ್ಷೇತ್ರ ಹೋಗಿ ಪರಿಹರಿಸಿಕೊಳ್ಳಬಹುದು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಇದ್ದುಕೊಂಡು ಶಿಕ್ಷಕರು ತಪ್ಪು ಮಾಡಿದರೆ ಆ ತಪ್ಪಿಗೆ ಯಾವ ಪುಣ್ಯ ಕ್ಷೇತ್ರಕ್ಕೂ ಹೋದರು ಕೂಡ ತೊಳೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಕ ವೃತ್ತಿಯು ಬಹಳ ಪವಿತ್ರ ಸ್ಥಾನ ಪಡೆದಿದ್ದು, ತಮ್ಮ ಕರ್ತವ್ಯದಲ್ಲಿ ಯಾವುದೇ ಲೋಪ ಎಸಗಬೇಡಿ ಎಂದು ಕೋರಿಕೊಂಡರು.

ಇದೇ ಸಂದರ್ಭದಲ್ಲಿ ಗಣ್ಯರಿಂದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರವನ್ನು ಅನಾವರಣಗೊಳಿಸಿ ಪುಷ್ಪಾರ್ಚನೆ ನೆರವೇರಿಸಲಾಯಿತು.

ತದನಂತರ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರಿಗೆ ಹಾಗೂ ನಿವೃತ್ತ ಶಿಕ್ಷಕರುಗಳಿಗೆ ಪ್ರಶಸ್ತಿ ವಿತರಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷೆ ಡಾ ಮೀರಾಶಿವಲಿಂಗಯ್ಯ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭುಗೌಡ, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರಾಜಯ್ಯ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ ನಾಗೇಶ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜೆ ವೈ ಮಂಜುನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಚಿಕ್ಕೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್ ಶಿವರಾಮೇಗೌಡ, ಡಯಟ್ ಶಿಕ್ಷಣ ಸಂಸ್ಥೆಯ ಉಪನಿರ್ದೇಶಕ ಪುರುಷೋತ್ತಮ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ದೇವರಾಜು, ಜಿಲ್ಲಾ ಪಂಚಾಯತ್ ನ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ, ವೀಣಾ, ಸೇರಿದಂತೆ ಎಲ್ಲಾ ಕ್ಷೇತ್ರ ಶಿಕ್ಷಕಣಾಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.