ಮಂಡ್ಯ: ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ರಾಮಂದೂರು ಕೆರೆ ಬಳಿ ನಡೆದಿದೆ.
ರಾಮನಾಥ ಮೋಳೆ ಗ್ರಾಮದ 21 ವರ್ಷದ ಯುವಕ ಮಂಜುನಾಥ್ ಎಂಬಾತನೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾನೆ.
ಮಂಜುನಾಥ್ ತಲೆಯ ಭಾಗದಲ್ಲಿ ಕಲ್ಲಿನಿಂದ ಹೊಡೆದಿರುವ ಗುರುತುಗಳು ಆತನ ಸಾವಿನ ಬಗ್ಗೆ ಅನುಮಾನ ಹುಟ್ಟುಹಾಕಿವೆ. ಮಗ ಅಪಘಾತದಲ್ಲಿ ಸಾವನ್ನಪ್ಪಿಲ್ಲ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಗ್ರಾಮವೊಂದರ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ ಮಂಜುನಾಥ್, ಕಳೆದ ಆರು ತಿಂಗಳ ಹಿಂದೆ ಹೆಣ್ಣು ಕೇಳಲು ಹೋದಾಗ ಯುವತಿಯ ಮನೆಯವರು ನಿರಾಕರಿಸಿದ್ದರು.
ಈ ವೇಳೆ ಪೋಷಕರನ್ನು ಬಿಟ್ಟು ಬಂದ ಅಪ್ರಾಪ್ತೆಯನ್ನು ಮಂಜುನಾಥ್ ತನ್ನ ಅಜ್ಜಿ ಮನೆಯಲ್ಲಿರಿಸಿದ್ದ. ಆಕೆಗೆ 18 ವರ್ಷ ತುಂಬಲು ಇನ್ನು 2 ತಿಂಗಳು ಬಾಕಿಯಿದ್ದ ಹಿನ್ನೆಲೆಯಲ್ಲಿ 18 ವರ್ಷ ತುಂಬಿದ ಬಳಿಕ ಮದುವೆ ಆಗಲು ನಿರ್ಧರಿಸಿದ್ದ ಎನ್ನಲಾಗಿದೆ.
ಆದರೆ ಇದ್ದಕ್ಕಿದ್ದಂತೆ ಮಂಜುನಾಥ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.





