Mysore
21
overcast clouds
Light
Dark

ಕಾವೇರಿ ಕುರಿತು ಸಮಗ್ರ ಚರ್ಚೆಗೆ ರೈತ ಹಿತರಕ್ಷಣಾ ಸಮಿತಿ ಒತ್ತಾಯ

ಬೆಂಗಳೂರು: ಕಾವೇರಿ ನದಿ ನೀರು ಪ್ರಾಧಿಕಾರವು ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸುವಂತೆ ಆದೇಶ ನೀಡಿರುವ ಹಿನ್ನೆಲೆ ನಾಳೆ(ಜು.14) ರಾಜ್ಯ ಸರರ್ಕಾರ ಕರೆದಿರುವ ಸರ್ವಪಕ್ಷ ಸಭೆ ಹಾಗೂ ಜು.15 ರಂದು ಪ್ರಾರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಸಂಸದರು ಹಾಗೂ ಶಾಸಕರು ಕಾವೇರಿ ನೀರು ಕುರಿತು ಸಮಗ್ರವಾಗಿ ಚರ್ಚಿಸಿ ನಿರ್ಣಯಕ್ಕೆ ಬರಬೇಕು ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಮನವಿ ಸಲ್ಲಿಸಿದೆ.

ಕೇಂದ್ರ ಸಚಿವರು ಹಾಗೂ ಮಂಡ್ಯ ಸಂಸದರು ಆದ ಎಚ್.ಡಿ ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ರಾಜ್ಯ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಅವರನ್ನು ರೈತ ಹಿತರಕ್ಷಣಾ ಸಮಿತಿಯ ನಿಯೋಗವು ಭೇಟಿ ಮಾಡಿ ಮನವಿ ಮಾಡಿತು.

ಕಾವೇರಿ ಕಣಿವೆ ಭಾಗದ ಜನರು ನೀರಿಲ್ಲದೆ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡುವುದು ಕಷ್ಟದ ಪರಿಸ್ಥಿತಿ. ಈ ಬಗ್ಗೆ ಸರ್ವಪಕ್ಷಗಳ ಸಭೆ ಹಾಗೂ ವಿಧಾನಸಭೆ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚೆ ಮಾಡಬೇಕು ಎಂದು ನಿಯೋಗವು ಒತ್ತಾಯಿಸಿತು.

ರಾಜ್ಯ ಸರ್ಕಾರ ಬೆಳೆ ಪರಿಹಾರವನ್ನು ಸರಿಯಾಗಿ ನೀಡಲಿಲ್ಲ.  ರೈತರು ಇರುವಷ್ಟು ಬೆಳೆಯನ್ನಾದರೂ ಉಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಕಾವೇರಿ ನದಿ ನೀರು ಪ್ರಾಧಿಕಾರವು ನೀರು ಹರಿಸಲು ಆದೇಶ ಮಾಡುವ ಮುನ್ನ ನದಿ ಪಾತ್ರದ ಪ್ರದೇಶವನ್ನು ವಿಕ್ಷಣೆ ಮಾಡಿ, ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಎಲ್ಲಾ ಸಂಸದರು, ಶಾಸಕರು ಸಭೆ ನಡೆಸಿ ಕಾವೇರಿ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಿಬೇಕು ಎಂದು ಮನವಿ ಸಲ್ಲಿಸಲಾಗಿದೆ.