Mysore
25
haze

Social Media

ಭಾನುವಾರ, 22 ಫೆಬ್ರವರಿ 2026
Light
Dark

ಮೇಲುಕೋಟೆಯಲ್ಲಿ ಹೆಜ್ಜೇನು ಕಡಿತ : ಭಕ್ತರ ಪರದಾಟ

ಮೇಲುಕೋಟೆ: ಅಷ್ಠತೀರ್ಥೋತ್ಸವದ ವೇಳೆ ಯಾದವತೀರ್ಥದ ಸಮೀಪ ಜೇನುಕಲ್ಲು ಮಂಟಿ ಬಳಿ ಹೆಜ್ಜೇನುದಾಳಿ ಮಾಡಿದ ಪರಿಣಾಮ ಭಕ್ತರು ಆತಂಕದಿಂದ ದೌಡಾಯಿಸಿದ ಘಟನೆ ನಡೆದಿದೆ. ಉತ್ಸವದಲ್ಲಿ ಭಾಗಿಯಾಗಿದ್ದ ಭಕ್ತರೊಬ್ಬರು ಜೇನುಕಟ್ಟಿರುವುದನ್ನು ಗಮನಿಸದೆ ಕರ್ಪೂರ ಹಚ್ಚಿದ ಪರಿಣಾಮ ಹೊಗೆಗೆ ಜೇನು ಚದುರಿದೆ. ರಾಜ್ಯ ಮತ್ತು ಆಂದ್ರಪ್ರದೇಶದ ೩೦ಕ್ಕೂ ಹೆಚ್ಚು ಮಂದಿಯ ಮೇಲೆ ಜೇನುದಾಳಿ ಮಾಡಿ ಕಚ್ಚಿದೆ.

ಮೇಲುಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಜಮುಡಿ, ತೊಟ್ಟಲಮಡು ಜಾತ್ರೆಯ ದಿನವೂ ವೈದ್ಯರಿಲ್ಲದ ಕಾರಣ ನರ್ಸ್‌ಗಳೇ ಚಿಕಿತ್ಸೆ ನೀಡಿದ್ದಾರೆ. ೨೦ ಮಂದಿ ಭಕ್ತರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ವೈದ್ಯರಿಲ್ಲದ ಕಾರಣ ಗಂಭೀರ ದಾಳಿಗೊಳಗಾದ ಎಂಟು ಮಂದಿ ಭಕ್ತರಾದ ಆಂದ್ರಪ್ರದೇಶದ ಜಯಶ್ರೀ, ರವಿಶಂಕರ್, ವಿಜಯಲಕ್ಷಿ, ನಾರಾಯಣನ್, ತಮಿಳುನಾಡಿನ ಬಾಲಾಜಿರಾವ್, ಮೋಹನ್, ಕುಮಾರ್, ಬೆಂಗಳೂರಿನ ರಾಜವರ್ಷನ್ ಮತ್ತು ಶ್ರೀರಂಗಪಟ್ಟಣದ ಮೋಹನ್‌ಕುಮಾರ್ ಅವರುಗಳನ್ನು ತಾಲ್ಲೂಕು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಯಿತು.

ಯಾರಿಗೂ ಪ್ರಾಣಾಪಾಯವಿಲ್ಲ ಎಂದು ಕರ್ತವ್ಯ ನಿರತ ನರ್ಸ್‌ಗಳು ಮಾಹಿತಿ ನೀಡಿದ್ದಾರೆ. ಮೇಲುಕೋಟೆಯಲ್ಲಿ ವೈದ್ಯರಿಲ್ಲದೆ ಚಿಕಿತ್ಸೆಗಾಗಿ ಭಕ್ತರು ಪರದಾಡಿದ ಕಾರಣ ನಾಗರೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೇನು ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಪಲಾಶರ ತೀರ್ಥದ ಬಳಿ ಉತ್ಸವದ ಜೊತೆಯಲ್ಲಿದ್ದ ಪಾರುಪತ್ತೇಗಾರರಾದ ಸ್ಥಾನೀಕಂ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಎಂ.ಎನ್.ಪಾರ್ಥಸಾರಥಿ ಆಸ್ಪತ್ರೆ ಸಿಬ್ಬಂದಿಯನ್ನು ಸಂಪರ್ಕಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಭಕ್ತರಿಗೆ ಸಾಂತ್ವನ ಹೇಳಿ ಧೈರ್ಯತುಂಬಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆಪಡೆಯಲು ಸಹಕಾರ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!