ಮಂಡ್ಯ: ವಿವಿಧ ಧರ್ಮಗಳು ಆಚರಿಸುವ ಧಾರ್ಮಿಕ ಪದ್ಧತಿಗಳು ಸಮುದಾಯವನ್ನು ಒಟ್ಟುಗೂಡಿಸುತ್ತದೆ. ಧಾರ್ಮಿಕ ಪದ್ಧತಿಗಳು ದೇಶದ ಪರಂಪರೆ ಕೂಡ ಆಗಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಸಚಿವ ಎನ್.ಚಲುವರಾಯಸ್ವಾಮಿ ಅವರಿಂದು ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ದೊಡ್ಡಬಾಲ ಗ್ರಾಮದಲ್ಲಿ 39 ವರ್ಷಗಳ ಬಳಿಕ ನಡೆಯುತ್ತಿರುವ ಹುಚ್ಚಪ್ಪಸ್ವಾಮಿಯ ಹಾಗೂ ಹದಿನಾಲ್ಕು ಕೂಟದ ದೇವರುಗಳ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಪ್ರಮುಖವಾದದ್ದು, ಜನರ ಆಶೀರ್ವಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಕ್ತಿ ತುಂಬಿದೆ ಎಂದು ಹೇಳಿದರು.
ಜನರು ನಮ್ಮನ್ನು ಸೋಲಿಸಲಿ ಅಥವಾ ಗೆಲ್ಲಿಸಲಿ, ಜಿಲ್ಲೆಯ ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ. ಸಿದ್ದರಾಮಯ್ಯ ಅವರು ಕಳೆದ 2013ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನೀಡಿದ 30 ಕೋಟಿ ಅನುದಾನದಲ್ಲಿ ನಾಗಮಂಗಲದಿಂದ ಬೆಳಗೊಳಕ್ಕೆ ರಸ್ತೆ ನಿರ್ಮಾಣ ಮಾಡಲಾಯಿತು. ಜನರಿಗೆ ಅನುಕೂಲವಾಗುವಂತೆ ಈ ಭಾಗದ ಎಲ್ಲಾ ಕೆರೆ-ಕಟ್ಟೆಗಳನ್ನು ಏತ ನೀರವಾರಿ ಯೋಜನೆ ಮೂಲಕ ತುಂಬಿಸುವ ಸಲುವಾಗಿ ಹಳೆಯ ಅನುದಾನ 250 ಕೋಟಿ ರೂ ಸೇರಿದಂತೆ 113 ಕೋಟಿ ರೂ ಹಣವನ್ನು ಮುಖ್ಯಮಂತ್ರಿಗಳು 6 ತಿಂಗಳ ಹಿಂದೆಯೇ ಮಂಜೂರು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಇನ್ನೂ ಎರಡು ಮೂರು ವರ್ಷಗಳ ನಂತರ ನಾಗಮಂಗಲದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಲಾಗುವುದು. ಇದರ ಜೊತೆಗೆ ಎಲ್ & ಟಿನಲ್ಲಿ ಕೆ.ಆರ್.ಪೇಟೆ, ಪಾಂಡವಪುರ ಹಾಗೂ ನಾಗಮಂಗಲಕ್ಕೆ ಸುಮಾರು 700 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.
ರಾಜ್ಯದ 224 ಮಳೆ ಆಶ್ರಿತ ತಾಲ್ಲೂಕುಗಳಿಗೆ ಕೃಷಿ ಹೊಂಡ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. ಇಂದು ಕೃಷಿ ಇಲಾಖೆಯಲ್ಲಿ 1000 ಕೋಟಿಗೂ ಹೆಚ್ಚು ಸಹಾಯಧನವನ್ನು ರೈತರ ಅಭಿವೃದ್ಧಿಗಾಗಿ ನೀಡಲಾಗಿದೆ ಎಂದರು.
ಈ ವೇಳೆ ಬಸರಾಳು, ಒಣಕೆರೆ, ದೇವಲಾಪುರಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾಡಿಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದರು.





