Mysore
21
few clouds

Social Media

ಸೋಮವಾರ, 16 ಫೆಬ್ರವರಿ 2026
Light
Dark

ಪರಿಪರಿಯಾಗಿ ಬೇಡಿದರೂ ಬರ ಪರಿಹಾರ ನೀಡದ ಮೋದಿ ಸರ್ಕಾರ: ಚಲುವರಾಯಸ್ವಾಮಿ ಆಕ್ರೋಶ

ಮಂಡ್ಯ: ರಾಜ್ಯದ 223 ತಾಲೂಕುಗಳಲ್ಲಿ ತೀವ್ರ ಬರವಿದೆ. ನಾವು ರೈತರ ನೆರವಿಗೆ ಧಾವಿಸಬೇಕು. ಹಲವು ಬಾರಿ ದೆಹಲಿ ದಂಡೆಯಾತ್ರೆ ನಡೆಸಿ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ ಅವರನ್ನು ಪರಿಪರಿಯಾಗಿ ಬೇಡಿದರು ಕೇಂದ್ರ ಸರ್ಕಾರ ಬರ ಪರಿಹಾರ ನೀಡಲಿಲ್ಲ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ರಾಜ್ಯದ 27 ಮಂದಿ ಬಿಜೆಪಿ ಸಂಸದರೂ ರಾಜ್ಯದ ಜನಕ್ಕಾಗಿ ಯಾವತ್ತು ಮೋದಿಯವರನ್ನ ಪ್ರಶ್ನಿಸಿಲ್ಲ, ಇಂತಹ ಸಂಸದರು ನಮಗೆ ಬೇಕೇ ಎಂದು ಕಿಡಿಕಾರಿದರು.

ಬಿಜೆಪಿ ಮೇಕೆದಾಟು ಯೋಜನೆಗೆ ಅನುಮತಿ ನೀಡಿಲ್ಲ. ಕೇಂದ್ರದ ಕೃಷಿ ಸಬ್ಸಿಡಿ ಕಡಿತವಾಗಿದೆ. ಬರದ ಬೇಗುದಿಗೆ ಸ್ಪಂದಿಸದ ಮೈತ್ರಿ ಪಕ್ಷಗಳ ನಡೆ ವಿರುದ್ಧ ಮತದಾರ ಜಾಗೃತನಾಗಿ, ಆ ಮೂಲಕ ಎನ್.ಡಿ.ಎ ನೇತೃತ್ವದ ಬಿಜೆಪಿಯನ್ನು ಜನರು ತಿರಸ್ಕರಿಸಬೇಕು ಎಂದು ಕರೆ ನೀಡಿದರು.

ಎಚ್‌.ಡಿ ಕುಮಾರಸ್ವಾಮಿ ಕುಟುಂಬ ರಾಜ್ಯದಲ್ಲಿ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದೆ. ಅಧಿಕಾರದಲ್ಲಿದ್ದಾಗ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಶಾಶ್ವತ ಯೋಜನೆ ನೀಡದ ಕುಮಾರಸ್ವಾಮಿ ಅವರು ಸಂಸದರಾಗಿ ಏನು ಮಾಡಲು ಸಾಧ್ಯ ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದು, ಮತದಾರರು ಇದನ್ನು ಅರ್ಥೈಸಿಕೊಂಡು ಧರ್ಮ, ಜಾತಿ , ಸುಳ್ಳು ಹಾಗೂ ಭಾವನಾತ್ಮಕ ಮಾತುಗಳನ್ನು ಧಿಕ್ಕರಿಸಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Tags:
error: Content is protected !!