ಮಂಡ್ಯ: ಈಗಾಗಲೇ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಸರ್ಕಾರ ತನ್ನ ದುರಾಡಳಿತವನ್ನು ತೋರುತ್ತಿದೆ. ಈ ಬಗ್ಗೆ ಜನ ಪ್ರತಿಭಟಿಸಿ ಎಚ್ಚರಿಗೆ ನೀಡಲಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಅವರು ಇಂದು(ಜೂ.16) ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದ ಕಾಲಬೈರವೇಶ್ವರ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲು ಬೆಲೆ ಏರಿಕೆ ಮಾಡಿರುವುದಾಗಿ ಕಾಂಗ್ರೆಸ್ ಸಚಿವರೇ ಹೇಳಿದ್ದಾರೆ. ಜನರಿಂದಲೇ ಹಣ ವಸೂಲಿ ಮಾಡಿ, ಅವರಿಗೆ ನೀಡಲು ಮುಂದಾಗಿದ್ದಾರೆ. ಇದರ ವಿರುದ್ಧ ಜನ ದಂಗೆ ಏಳಲಿ ಎಂದರು.
ಕಾಲಬೈರವನ ದರ್ಶನ ಮಾಡಿ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಒಕ್ಕಲಿಗ ಸಮಾಜ ಮತ್ತು ರಾಜ್ಯಕ್ಕೆ ಗೌರವ ತರುವಂತೆ ಕೆಲಸ ಮಾಡಲು ಶಕ್ತಿ ನೀಡುವಂತೆ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.