Mysore
36
few clouds

Social Media

ಸೋಮವಾರ, 27 ಏಪ್ರಿಲ 2026
Light
Dark

ರೈತರಿಗೆ ಪರಿಹಾರ ನೀಡುತ್ತೇವೆಂದು 6ನೇ ಗ್ಯಾರಂಟಿ ಘೋಷಿಸಲಿ : ಕುಮಾರಸ್ವಾಮಿ

ಮಂಡ್ಯ : ರಾಜ್ಯದ ಕಾಂಗ್ರೆಸ್ ಸರ್ಕಾರ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹುಡುಗಾಟ ಆಡುವುದನ್ನು ಮೊದಲು ಬಿಡಬೇಕು. 5 ಗ್ಯಾರಂಟಿ ಯೋಜನೆಗಳ ಜತೆಗೆ ಬೆಳೆ ಬೆಳೆಯಬೇಡಿ, ಪರಿಹಾರ ನೀಡುತ್ತೇವೆ ಎಂದು ರೈತರಿಗೆ ಹೇಳುವ ಮೂಲಕ 6ನೇ ಗ್ಯಾರಂಟಿಯನ್ನು ಘೋಷಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಸೋಮವಾರ ನಗರಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಪಕ್ಷವಾಗಲಿ ನಾನಾಗಲಿ ಕಾವೇರಿ ನದಿ ನೀರಿನ ವಿಚಾರವಾಗಿ ಎಂದೂ ರಾಜಕೀಯ ಮಾಡಿಲ್ಲ. ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದವರು ಹೇಳಿದ ತಕ್ಷಣ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿದೆ. ನೀರು ಬಿಡದೆ ಪ್ರತಿಭಟನೆ ಮಾಡಬೇಕಿತ್ತು. ತಮಿಳುನಾಡಿನವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿದ್ದು, ಅದರ ವಿರುದ್ಧ ನಾವೂ ಅರ್ಜಿ ಹಾಕಿ, ತೀರ್ಪಿಗೆ ನಾವು ಬದ್ಧರಾಗಬೇಕಿತ್ತು ಎಂದು ಹೇಳಿದರು.

ಜನರ ಹಿತರಕ್ಷಣೆಗೆ ನಮ್ಮ ಬೆಂಬಲ : ಜನ ಹಿತರಕ್ಷಣೆಗೆ ಒಳ್ಳೆಯ ಕೆಲಸ ಮಾಡಿ, ನಾವು ಬೆಂಬಲ ಕೊಡುತ್ತೇವೆಂದು ಹೇಳಿದ್ದೀನಿ. ಆದ್ದರಿಂದ ರಾಜ್ಯ ಸರ್ಕಾರ ಹುಡುಗಾಟ ಬಿಡಬೇಕು. ಮಂಡ್ಯ ಜಿಲ್ಲೆಯ ರೈತರು ಪ್ರತಿಭಟನೆ ಮಾಡಿದರು. ಆದರೆ, ರೈತರನ್ನು ಸುಪ್ರೀಂ ಕೋರ್ಟ್ ಗೆ ಹೋಗಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು. ಹಾಗಿದ್ದರೆ ಇವರಿಗೆ ಪೇಪರ್, ಪೆನ್ ಕೊಟ್ಟಿದ್ದೇಕೆ? ರಕ್ಷಣೆ ಮಾಡಲೆಂದು ಅಧಿಕಾರ ಕೊಟ್ಟಿದ್ದಾರೆ. ಆದ್ದರಿಂದ ನೀರಾವರಿ ಮಂತ್ರಿ ಹೇಳಿಕೆಯನ್ನು ಕೊಡುವುದು ಬಿಟ್ಟು ಸರಿಯಾದ ಕೆಲಸ ಮಾಡಬೇಕು. ರೈತರಿಗೆ ಬೆಳೆ ಹಾಕಬೇಡಿ, ಪರಿಹಾರ ಕೊಡುತ್ತೇವೆಂದು ಘೋಷಣೆ ಮಾಡಿ. ಸಾಲ ಮಾಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪುತ್ತದೆ ಎಂದು ಹೇಳಿದರು.

ಎಚ್‌ಡಿಡಿ ಹೋರಾಟದ ಫಲ 15 ಟಿಎಂಸಿ ಹೆಚ್ಚು ನೀರು : ಕೆಲವರು ರಾಜಕೀಯವಾಗಿ ಮಾತನಾಡುತ್ತಾರೆ. ಈ ಹಿಂದೆ ತಮಿಳುನಾಡಿಗೆ ಹಲವಾರು ಸಂದರ್ಭದಲ್ಲಿ ನೀರು ಕೊಟ್ಟಿದ್ದೇವೆ. ಇಂತಹ ಪರಿಸ್ಥಿತಿ ಇದ್ದಾಗ ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ನುರಿತ ತಜ್ಞರ ಜತೆ ಚರ್ಚಿಸಿ ನಿರ್ಧಾರ ಮಾಡಬೇಕು. ಇದು ಸೂಕ್ಷ್ಮವಾದ ವಿಚಾರ. ಕಾವೇರಿ ನದಿ ನೀರು ವಿಚಾರದಲ್ಲಿ ನಾನು ಮುಖ್ಯಮಂತ್ರಿ ಇದ್ದಾಗಲೇ ಟ್ರಿಬ್ಯುನಲ್‌ಗೆ ವರದಿ ಕೊಟ್ಟಿದ್ದೇವೆ. ದೇವೇಗೌಡರ ಸಲಹೆ ಮೇರೆಗೆ ಕೋರ್ಟ್ ಗೆ ಹೋಗಿ ಹೋರಾಟದ ಫಲ 17 ಟಿ.ಎಂ.ಸಿ ನೀರು ಕರ್ನಾಟಕಕ್ಕೆ ಹೆಚ್ಚುವರಿ ಸಿಕ್ಕಿದೆ. ಅದು ದೇವೆಗೌಡರ ಹೋರಾಟದ ಪ್ರತಿಫಲ ಎಂದರು.

ಸ್ವತಂತ್ರವಾಗಿ ಲೋಕಸಭಾ ಚುನಾವಣೆ ಎದುರಿಸುತ್ತೇವೆ : 2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಎದುರಿಸುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕಳೆದ 2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದರಿಂದ ನಮ್ಮ ಕುತ್ತಿಗೆಯನ್ನೇ ಕೂಯ್ದರು. ಮೈತ್ರಿಯಿಂದ ನನ್ನ ಕಾರ್ಯಕರ್ತರು ಬಲಿಪಶುಗಳಾದರು. ಮೈತ್ರಿ ಆಗದಿದ್ದರೆ ಮಂಡ್ಯದಲ್ಲಿ ಸೋಲುವ ಪ್ರಶ್ನೆಯೇ ಇರಲಿಲ್ಲ ಎಂದರು.

28 ಕ್ಷೇತ್ರದಲ್ಲೂ ಅಭ್ಯರ್ಥಿ ಹಾಕಬೇಕು ಎಂಬ ಅಭಿಪ್ರಾಯ ಇದೆ. ಇದರಿಂದ ಎಲ್ಲ ಕ್ಷೇತ್ರದಲ್ಲಿ ಗೆಲ್ಲುತ್ತೇವೆಂದು ನಾನು ಹೇಳಲ್ಲ. ಕನಿಷ್ಠ ನಾಲ್ಕೆದು ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ. 28 ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಸದ್ಯಕ್ಕೆ ರಾಜಕೀಯದ ಸಹವಾಸಕ್ಕೆ ಹೋಗಬೇಡ ಎಂದು ನಿಖಿಲ್‌ಗೆ ಸಲಹೆ ನೀಡಿದ್ದೇನೆ. ಕಲಾವಿದನಾಗಿ ಬದುಕು ರೂಪಿಸಿಕೊಳ್ಳಲು ಹೇಳಿದ್ದೇನೆ. ನಿಖಿಲ್ ಚುನಾವಣೆಗೆ ನಿಲ್ಲುವ ಪ್ರಶ್ನೆ ಇಲ್ಲ. ಈಗಾಗಲೇ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಕೆಲವು ಸಂಸ್ಥೆಗಳು ಮುಂದೆ ಬಂದಿವೆ. ಸಿನಿಮಾ ಮಾಡಲು ನಿಖಿಲ್ ಮುಖ ಮಾಡಿದ್ದಾರೆ. ಈಗಾಗಲೇ ಎರಡು ಬಾರಿ ನಿಖಿಲ್ ಸೋತಿದ್ದಾನೆ ದೇವೇಗೌಡರು, ನಾನು ಎಲ್ಲರೂ ಸೋತಿದ್ದೇವೆ. ಜನಾಭಿಪ್ರಾಯ ಏನು ಇದೆ ಅದಕ್ಕೆ ತಲೆಬಾಗಬೇಕು. ನಾನು ಒತ್ತಡಗಳ ಮೇಲೆ ಚುನಾವಣೆ ಮಾಡಲ್ಲ ಎಂದರು.

ಪಕ್ಷನಿಷ್ಠ ಯಾರಲ್ಲೂ ಉಳಿದಿಲ್ಲ : ರಾಜ್ಯದಲ್ಲಿ ಆಪರೇಷನ್ ಹಸ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷನಿಷ್ಠೆ ಯಾರಲ್ಲೂ ಉಳಿದಿಲ್ಲ. ವೈಯಕ್ತಿಕ ಸ್ಥಾನಮಾನಕ್ಕಾಗಿ ಪಕ್ಷಾಂತರ ಮಾಡುತ್ತಾರೆ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸದ್ಯ ನಮ್ಮ ಪಕ್ಷದಲ್ಲಿದ್ದಾರೆ. ಪಕ್ಷಾಂತರ ಬಗ್ಗೆ ಅವರನ್ನೇ ಕೇಳಬೇಕು. ನಾನು ಈ ಬಗ್ಗೆ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!