ಮೈಸೂರು : ಮೈಷುಗರ್ ಸಕ್ಕರೆ ಕಾರ್ಖನೆಯಲ್ಲಿ ರೈತರಿಗೆ ಕುಡಿಯುವ ನೀರಿನ ಆರ್.ಓ ಅಳವಡಿಸುವಂತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ರೈತ ಮುಖಂಡರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಹಾಜರಿದ್ದ ರೈತ ಮುಖಂಡರುಗಳು ಬಾಯ್ಲರ್ ತೊಂದರೆಯಿಂದ ಕಬ್ಬು ಹರಿಯುವ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ, ಇದರಿಂದ ರೈತರು ಎತ್ತಿನ ಗಾಡಿ ಹಾಗೂ ಕಬ್ಬಿನೊಂದಿಗೆ ಮೈ ಶುಗರ್ ಹೊರ ಆವರಣದಲ್ಲಿ ಕಾಯುವ ಪರಿಸ್ಥಿತಿ ಎದುರಾಗಿದೆ. ಕಬ್ಬು ಹರಿಯುವಿಕೆ ಕುರಿತು ಸರಿಯಾದ ಮಾಹಿತಿ ದೊರೆಯುತ್ತಿಲ್ಲ ಹಾಗೂ ಇನ್ನಿತರೆ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.
ಜಿಲ್ಲಾಧಿಕಾರಿಗಳು ಮಾತನಾಡಿ ಮೈಷುಗರ್ ಹೊರಾವರಣದಲ್ಲಿ ಪ್ರತಿ ದಿನ ಕಬ್ಬು ಹರಿಯುವಿಕೆಯ ಮಾಹಿತಿಯನ್ನು ಅನಾವರಣಗೊಳಿಸಬೇಕು ಹಾಗೂ ಒಬ್ಬರು ಗಾಡ್೯ ಸೂಪರ್ ವೈಸರ್ ನ್ನು ಮಾಹಿತಿ ನೀಡಲು ನೇಮಕ ಮಾಡಬೇಕು ಎಂದರು.
ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಯಾಗಬೇಕು, ಕ್ಯಾಂಟೀನ್ ತೆರೆಯಲು ಸ್ಥಳದ ವ್ಯವಸ್ಥೆ ಮಾಡಿ ಆಸಕ್ತರು ಇಚ್ಛಿಸಿದಲ್ಲಿ ತೆರೆಯಲು ಅವಕಾಶ ಮಾಡಿಕೊಡಿ, ಇದರಿಂದ ರೈತರು ಆಹಾರ ಖರೀದಿಸಲು ದೂರದ ಸ್ಥಳಕ್ಕೆ ತೆರಳುವುದು ತಪ್ಪುತ್ತದೆ ಎಂದರು.
ಕಬ್ಬು ಹರಿಯುವಿಕೆಯ ವೇಗ ಕಡಿಮೆ ಇದ್ದು, ಪ್ರತಿ ದಿನ 2400 ರಿಂದ 2500 ಟನ್ ಕಬ್ಬು ಹರಿಯುವ ರೀತಿ ವೇಗ ಹೆಚ್ಚಿಸಿ ಕೊಳ್ಳಲು ಕ್ರಮ ವಹಿಸಬೇಕು. ಸುತ್ತ ಮುತ್ತಲಿನ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ರಿಕವರಿ 9.6 ರಿಂದ 9.7 ಇದ್ದು, ಮೈಷುಗರ್ ನಲ್ಲಿ ಕಡಿಮೆ ಇದೆ. ಈ ಕುರಿತಂತೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದರು.
ಮೈಷುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಮೈಷುಗರ್ ಸಕ್ಕರೆ ಕಾರ್ಖಾನೆಯ ಕಬ್ಬು ಹರೆಯುವಿಕೆ ಹಾಗೂ ಕಾರ್ಖಾನೆಯ ಇನ್ನಿತರೆ ವಿಷಯಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್, ಜನರಲ್ ಮ್ಯಾನೇಜರ್ (ತಾಂತ್ರಿಕ) ಅಪ್ಪ ಸಹೇಬ್ ಪಾಟೀಲ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಪ್ರತೀಕ್ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.




