ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯ ಭರ್ತಿಯತ್ತ ಸಾಗಿದೆ.
ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹಾರಂಗಿ ಜಲಾಶಯ ಸಂಪೂರ್ಣ ಭರ್ತಿಯತ್ತ ಸಾಗಿದೆ. ಪರಿಣಾಮ ಹಾರಂಗಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿದೆ.
ಈ ಬೆನ್ನಲ್ಲೇ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯ ಕೂಡ ಭರ್ತಿಯಾಗುತ್ತಿದ್ದು, ಅನ್ನದಾತರ ಮುಖದಲ್ಲಿ ಭಾರೀ ಮಂದಹಾಸ ಮನೆಮಾಡಿದೆ.
ಕೆಆರ್ಎಸ್ ಜಲಾಶಯದ ಒಳಹರಿವು 34000 ಕ್ಯೂಸೆಕ್ಸ್ಗಳಾಗಿದ್ದು, ಹೊರಹರಿವನ್ನು 2376 ಕ್ಯೂಸೆಕ್ಸ್ಗೆ ಏರಿಕೆ ಮಾಡಲಾಗಿದೆ. ಈಗ 111.50 ಅಡಿಯಷ್ಟು ಕೆಆರ್ಎಸ್ ಜಲಾಶಯ ಭರ್ತಿಯಾಗಿದೆ.
ಇನ್ನೂ ಜಲಾಶಯಕ್ಕ ಒಳಹರಿವು ಹೆಚ್ಚಾದಂತೆ ಯಾವುದೇ ಕ್ಷಣದಲ್ಲಾದರೂ ಹೊರಹರಿವನ್ನು ಹೆಚ್ಚಳ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ಪರಿಣಾಮ ಕಾವೇರಿ ನದಿಯ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನತೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.





