ಕೆ.ಆರ್.ಪೇಟೆ : ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟರಿರುವ ಘಟನೆ ಕರೋಟಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಕರೋಟಿ ಗ್ರಾಮದ ನವೀನ್ (21) ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿಯಾಗಿದ್ದಾರೆ. ಗ್ರಾಮದ ನಿವಾಸಿ ಜಯಲಕ್ಷ್ಮಿ ಮತ್ತು ಹುಚ್ಚೇಗೌಡ ದಂಪತಿಯ ಪುತ್ರನಾದ ನವೀನ್ ರಜೆಯ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ. ಈ ವೇಳೆ ಹಠಾತ್ ಹೃದಯಾಘಾತವಾಗಿ ಕಿಕ್ಕೇರಿ ಪ್ರಾಥಮಿಕ ಆಸ್ಪತ್ರೆಗೆ ತಕ್ಷಣ ಚಿಕಿತ್ಸೆಗೆ ದಾಖಲಿಸಲಾಯಿತು. ಆದರೆ, ವೈದ್ಯರು ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನವೀನ್ ಕೊನೆಯುಸಿರೆಳೆದಿದ್ದಾರೆ.
ಇಂಜಿನಿಯರ್ ವಿದ್ಯಾರ್ಥಿ ನವೀನ್ ಹಠಾತ್ ಸಾವು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ದಿಗ್ಭ್ರಮೆ ಮೂಡಿಸಿದೆ. ಬುಧವಾರ ಮಧ್ಯಾಹ್ನ ಕರೋಟಿ ಗ್ರಾಮದಲ್ಲಿ ನವೀನ್ ಅಂತ್ಯಕ್ರಿಯೆ ನೆರವೇರಿಸಲಾಯಿತು. ನವೀನ್ನ ತಂದೆ-ತಾಯಿ ಸೇರಿದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.





