ಮಂಡ್ಯ: ಚುನಾವಣೆ ಬಂದರೆ ಸಾಕು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೃದಯ ಸಮಸ್ಯೆಯಿದೆ ಎಂದು ಆಸ್ಪತ್ರೆಗೆ ದಾಖಲಾಗುತ್ತಾರೆ. ಇದಕ್ಕೆಲ್ಲಾ ಮರುಳಾಗಬೇಡಿ ಇದು ಅಭಿವೃದ್ಧಿ ವರ್ಸಸ್ ಕಣ್ಣೀರಿಡುವ ಚುನಾವಣೆಯಾಗಿದೆ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಕುಟುಕಿದ್ದಾರೆ.
ಮಳವಳ್ಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಚಿವ ಚೆಲುವರಾಯಸ್ವಾಮಿ ಅವರಿಗೆ ಇರುವ ಕಾಯಿಲೆಯೇ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೂ ಇದೆ. ಚೆಲುವರಾಯಸ್ವಾಮಿ ಆಸ್ಪತ್ರೆಗೆ ದಾಖಲಾದರೆ ಒಂದು ತಿಂಗಳು ಆಚೆ ಬರಲ್ಲ. ಆದರೇ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಹೃದಯ ಚಿಕಿತ್ಸೆಯಾದ ಎರಡನೇ ದಿನಕ್ಕೆ ಆಚೆ ಬರುತ್ತಾರೆ. ಆಚೆ ಬಂದ ನಾಲ್ಕನೇ ದಿನಕ್ಕೆ ರಾಜ್ಯ ಸುತ್ತುತ್ತಾರೆ ಹೇಗೆ? ಎಂದು ಶಾಸಕರು ಪ್ರಶ್ನೆ ಮಾಡಿದರು.
ಇವೆಲ್ಲಾ ಚುನಾವಣೆಯ ಗಿಮಿಕ್. ನನಗೆ ಆ ತೊಂದರೆಯಿದೆ, ಈ ತೊಂದರೆಯಿದೆ ಎಂದು ಹೇಳಿದರೇ ಕೇಳಬೇಡಿ. ಅಧಿಕಾರದಲ್ಲಿದ್ದಾಗ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿ. ಈ ಚುನಾವಣೆ ಅಭಿವೃದ್ಧಿ ವರ್ಸಸ್ ಕಣ್ಣೀರಿಡುವ ಚುನಾವಣೆಯಾಗಿದೆ. ಕಾಂಗ್ರೆಸ್ಗೆ ಹೆಚ್ಚಿನ ಮತ ನೀಡಿ ಅಭಿವೃದ್ಧಿಗಾಗಿ ಹಕ್ಕು ಚಲಾಯಿಸಿ ಎಂದು ಸಲಹೆ ನೀಡಿದರು.