Mysore
28
clear sky

Social Media

ಮಂಗಳವಾರ, 07 ಏಪ್ರಿಲ 2026
Light
Dark

ಡೇವಿಡ್‌ ಬ್ಯಾಟಿಂಗ್‌ ಅಬ್ಬರ ; ಆರ್‌ಸಿಬಿಗೆ ವಿಕ್ಟರಿ, ಚೆನ್ನೈಗೆ ಸೋಲು

ಬೆಂಗಳೂರು : ನಾಯಕ ರಜತ್‌ ಪಾಟೀದಾರ್‌, ಟಿಮ್ ಡೇವಿಡ್, ದೇವ್‌ದತ್ ಪಡಿಕ್ಕಲ್ ಅವರ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ಧ 43ರನ್‌ಗಳ ಭರ್ಜರಿ ಜಯ ಸಾಧಿಸಿ, ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನವಾರ ನಡೆದ 19ನೇ ಆವೃತ್ತಿಯ ಐಪಿಎಲ್-2026ರ 11 ನೇ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 250 ರನ್ ಗಳಿಸಿತು. ಈ ಮೊತ್ತ ಬೆನ್ನತ್ತುವಲ್ಲಿ ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 207ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟಿಂಗ್ ಇಳಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಮೊದಲ ಎರಡು ಓರ್ವ ಯಾವುದೇ ಬೌಂಡರಿ ಬಾರಿಸಲಾಗದೇ ಪರದಾಡಿದರಾದರೂ ನಂತರ ಒಳ್ಳೆಯ ರನ್ ಕಲೆಹಾಕಿ ಸಮಾಧಾನಕರ ಆರಂಭ ಕಟ್ಟಿಕೊಟ್ಟರು. ಕೊಹ್ಲಿ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಫಿಲ್ ಸಾಲ್ಟ್ 46 ರನ್ ಬಾರಿಸಿ ನಿರ್ಗಮಿಸಿದರು.

ಬಳಿಕ ಅಬ್ಬರಿಸಿದ ದೇವದತ್ ಪಡಿಕ್ಕಲ್ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಚಚ್ಚಿದರು. ಪಡಿಕ್ಕಲ್ ವಿಕೆಟ್ ಬಿದ್ದ ಬಳಿಕ ಜೊತೆಯಾದ ನಾಯಕ ರಜತ್ ಪಟಿದಾರ್ ಹಾಗೂ ಟಿಮ್ ಡೇವಿಡ್ ಜೋಡಿ 35 ಎಸೆತಗಳಲ್ಲಿ 99 ರನ್ ಚಚ್ಚಿ ಸಿಕ್ಸರ್‌ಗಳ ಸುರಿಮಳೆ ಸುರಿಸಿದರು.

ರಜತ್ ಪಟಿದಾರ್ 19 ಎಸೆತಗಳಲ್ಲಿ 1 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 48 ರನ್ ಬಾರಿಸಿ ಅಬ್ಬರಿಸಿದರೆ, ಟಿಮ್ ಡೇವಿಡ್ ಮೊದಲ ಆರು ಎಸೆತಗಳಲ್ಲಿ ನಿಧಾನಗತಿಯ ಆಟವನ್ನಾಡಿ ಬಳಿಕ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 70 ರನ್ ಬಾರಿಸಿ, ತಂಡದ ಮೊತ್ತ ಇನ್ನೂರೈತ್ತು ದಾಟಲು ಕಾರಣರಾದರು.

ಆರ್‌ಸಿಬಿ ನೀಡಿದ ಬೃಹತ್ ಮೊತ್ತ ಬೆನ್ನತ್ತಿದ ಸಿಎಸ್‌ಕೆಗೆ ಆರಂಭಿಕ ಆಘಾತ ಎದುರಾಯಿತು. ಸಂಜು ಸ್ಯಾಮ್ಸನ್ 9, ನಾಯಕ ಋತುರಾಜ್ ಗಾಯಕ್ವಾಡ್ 7, ಆಯೂಷ್ ಮ್ಹಾತ್ರೆ 1 ರನ್ ಗಳಿಸಿ ಮುಗ್ಗರಿಸಿದರು. ಆ ಮೂಲಕ ಸಿಎಸ್‌ಕೆ 2.5 ಓವರ್‌ಗಳಲ್ಲಿ 30 ರನ್ ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ವೇಳೆ ಅಬ್ಬರದ ಬ್ಯಾಟಿಂಗ್ ಆಡಿದ ಸರ್ಫರಾಜ್ ಖಾನ್ 25 ಎಸೆತಗಳಲ್ಲಿ 50 ರನ್ ಕಲೆಹಾಕಿ ಔಟಾದರು. ಬಳಿಕ ಬಂದ ಕಾರ್ತಿಕ್ ಶರ್ಮಾ 6 ರನ್ ಗಳಿಸಿ ಬಂದಷ್ಟೆ ವೇಗವಾಗಿ ಹಿಂತಿರುಗಿದರು.

ಕೆಳಕ್ರಮಾಂಕದಲ್ಲಿ ಅಬ್ಬರಿಸಿದ ಪ್ರಶಾಂತ್ ವೀರ್ 29 ಎಸೆತಗಳಲ್ಲಿ 43 ಹಾಗೂ ಜೇಮಿ ಓವರ್‌ಟರ್ನ್ 16 ಎಸೆತಗಳಲ್ಲಿ 37 ರನ್ ಗಳಿಸಿದರು. ಉಳಿದಂತೆ ಶಿವಂ ದುಬೆ 18, ನೂರ್ ಅಹ್ಮದ್ 8, ಮ್ಯಾಟ್ ಹೆನ್ರಿ 2 ಹಾಗೂ ಅನ್ಶುಲ್ ಕಂಬೋಜ್ ಅಜೇಯ 12 ರನ್ ಗಳಿಸಿದರು.

ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ ಪ್ರಮುಖ 3 ವಿಕೆಟ್ ಕಿತ್ತರು. ಜಾಕೋಬ್ ಡಫಿ, ಅಭಿನಂದನ್ ಸಿಂಗ್ ಹಾಗೂ ಕ್ರುನಾಲ್ ಪಾಂಡ್ಯ ತಲಾ 2 ವಿಕೆಟ್, ಸುಯೇಶ್ ಶರ್ಮಾ ಒಂದು ವಿಕೆಟ್ ಕಬಳಿಸಿದರು.
ಭರ್ಜರಿ ಬ್ಯಾಟಿಂಗ್ ಮೂಲಕ ಆರ್‌ಸಿಬಿಗೆ ಗೆಲುವು ತಂದುಕೊಟ್ಟ ಟಿಮ್ ಡೇವಿಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Tags:
error: Content is protected !!