Mysore
20
scattered clouds

Social Media

ಬುಧವಾರ, 18 ಮಾರ್ಚ್ 2026
Light
Dark

ಒಳಮೀಸಲಾತಿ ಮೂಲಕ ಪರಿಶಿಷ್ಟ ಜಾತಿಗಳನ್ನು ಒಡೆಯುತ್ತಿರುವ ಕಾಂಗ್ರೆಸ್ : ಬಿಎಸ್‌ಪಿ ಆರೋಪ

ಮಳವಳ್ಳಿ : ಒಳಮೀಸಲಾತಿ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಪರಿಶಿಷ್ಟ ಜಾತಿಗಳನ್ನು ಒಡೆಯುವ ನೀತಿಯನ್ನು ಅನುಸರಿಸಿದೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಆರೋಪಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಬಹುಜನ ಸಮಾಜ ಪಕ್ಷದ ಸಂಸ್ಥಾಪಕರಾದ ಕಾನ್ಶಿರಾಂ ಜೀ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಬಹುಜನ ದಿವಸ್ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿಯ ಒಂದು ಪಂಗಡ ಒಳಮೀಸಲಾತಿಗಾಗಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಈ ವಿಚಾರವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಆದರೆ ಅವೈಜ್ಞಾನಿಕ ರೋಸ್ಟರ್ ವ್ಯವಸ್ಥೆ ಅಳವಡಿಸಿ ಪರಿಶಿಷ್ಟ ಜಾತಿಗಳಲ್ಲಿ ಗೊಂದಲ ಉಂಟುಮಾಡಿದೆ ಎಂದು ಅವರು ಹೇಳಿದರು.

ಎಸ್‌ಸಿ ಎಸ್‌ಟಿ ಸಮುದಾಯಗಳಿಗಾಗಿ ಮೀಸಲಾಗಿದ್ದ ಸುಮಾರು 53 ಸಾವಿರ ಕೋಟಿ ರೂ.ಗಳನ್ನು ಬೇರೆ ಯೋಜನೆಗಳಿಗೆ ದುರುಪಯೋಗ ಮಾಡಲಾಗುತ್ತಿದೆ. ಇದರ ಕುರಿತು ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಕಾಂಗ್ರೆಸ್ ದಲಿತ ಶಾಸಕರೂ ಮಾತನಾಡುತ್ತಿಲ್ಲ ಎಂದು ಟೀಕಿಸಿದರು. ಇಂತಹ ದಲಿತ ವಿರೋಧಿ ನೀತಿಗಳನ್ನು ಅನುಸರಿಸುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕೆಂದು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ನಂತರ ಶೋಷಿತ ಸಮುದಾಯಗಳಿಗೆ ರಾಜಕೀಯ ಅಽಕಾರ ದೊರಕಿಸಲು ಜಾಗೃತಿ ಮೂಡಿಸಿದ ಮಹಾನ್ ನಾಯಕ ದಾದಾಸಾಹೇಬ್ ಕಾನ್ಶಿರಾಂ ಜೀ ಎಂದು ಅವರು ಹೇಳಿದರು. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವನ್ನು ಕಟ್ಟಿ, ಅಕ್ಕ ಮಾಯಾವತಿಯನ್ನು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಮಾಡಿದ್ದು ಅವರ ಸಾಧನೆ ಎಂದು ಸ್ಮರಿಸಿದರು. ರಾಜ್ಯದಲ್ಲಿಯೂ ಬಿಎಸ್‌ಪಿಯನ್ನು ಬಲಪಡಿಸುವ ಮೂಲಕ ಅಧಿಕಾರ ಪಡೆಯೋಣ ಎಂದು ಕರೆ ನೀಡಿದರು.

ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್, ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್, ರಾಜ್ಯ ಉಸ್ತುವಾರಿ ಹ.ರಾ. ಮಹೇಶ್, ರಾಜ್ಯ ಕಾರ್ಯದರ್ಶಿ ಸುಧಾ ಮಾತನಾಡಿದರು.

ರಾಜ್ಯ ಕಾರ್ಯದರ್ಶಿ ನಾಗಯ್ಯ, ಜಾಕೀರ್ ಆಲಿ ಖಾನ್, ಮೈಸೂರು ವಲಯ ಉಸ್ತುವಾರಿ ಕೆ.ಟಿ.ರಾಧಾಕೃಷ್ಣ, ಜಿಲ್ಲಾಧ್ಯಕ್ಷ ಶಿವ ಶಂಕರ್, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸುಧಾಕರ್, ಜಿಲ್ಲಾ ಸಂಯೋಜಕ ಬೋರಯ್ಯ, ಜಿಲ್ಲಾ ಉಸ್ತುವಾರಿ ವೀರಭದ್ರಯ್ಯ, ಜಿಲ್ಲಾ ಕಾರ್ಯದರ್ಶಿ ಉಮೇಶ.ಎಸ್.ಮೌರ್ಯ, ಬಿಎಸ್‌ಪಿ ಮುಖಂಡರಾದ ದೌಲತ್ ಪಾಷಾ, ಮಾಯೀಗೌಡ, ಲೋಕೇಶಗೌಡ, ನಾಗರಾಜು, ಸುರೇಶ್, ಬಿ.ಡಿ.ರಾಜೇಂದ್ರ, ಸಿದ್ದಲಿಂಗಮೂರ್ತಿ, ಕೆ.ಜಿ,ದೇವರಾಜು, ಎನ್.ಅಶೋಕ, ಚನ್ನಪ್ಪ, ಪ್ರಮೋದ, ಗೋವಿಂದ, ಸಂತೋಷ, ಮಹೇಶ್ ಎಚ್.ಮೌರ್ಯ, ಮಹಾಲಿಂಗ, ಆನಂದ್, ಶಿವಪ್ರಕಾಶ್, ಕೀರ್ತಿ, ತಮ್ಮಯ್ಯ, ಸಲೀಂ ಇತರರಿದ್ದರು.

Tags:
error: Content is protected !!