ಮೈಸೂರು: ಹಳ್ಳಿ ಮೈಸೂರು ಭಾಗದ ರೈತರ ಜೀವನಾಡಿಯಾಗಿರುವ ಕನ್ನಂಬಾಡಿ ಅಣೆಕಟ್ಟಿನ ನಿರ್ಮಾಣಕ್ಕೆ ತನ್ನ ಮೈಮೇಲಿನ ಒಡವೆಗಳನ್ನೇ ಧಾರೆ ಎರೆದ ದಿ.ಕೆಂಪನಂಜಮ್ಮಣ್ಣಿಯವರ ಪುಣ್ಯಸ್ಮರಣೆಯನ್ನು ಶುಕ್ರವಾರ(ಜು.12) ನಗರದ ಬೋಗಾಧಿ ರಸ್ತೆಯ ಅಂಕಲ್ ಲೋಬೋಸ್ ಸುಗ್ಗಿಮನೆ ಹೊಟೇಲ್ ನಲ್ಲಿ ಸರಳವಾಗಿ ಆಚರಿಸಲಾಯಿತು.
ಹಿರಿಯ ಪತ್ರಕರ್ತ ಬಿ.ಆರ್.ಮಂಜುನಾಥ್ ಕೆಂಪನಂಜಮ್ಮಣ್ಣಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಜನಕಲ್ಯಾಣಕ್ಕಾಗಿ ತನ್ನ ಬದುಕನ್ನೇ ಮುಡುಪಿಟ್ಟ ಈ ರಾಜಮಾತೆಯ ಮಹಾನ್ ತ್ಯಾಗವನ್ನು ಜನತೆ ಪ್ರತಿದಿನವೂ ಸ್ಮರಿಸುವಂತಾಗಬೇಕು. ಇವರ ಪ್ರತಿಮೆಯನ್ನು ಮೈಸುರು, ಮಂಡ್ಯ ನಗರದ ಹೃದಯ ಭಾಗದಲ್ಲಿ ಹಾಗೂ ಕನ್ನಂಬಾಡಿ ಅಣೆಕಟ್ಟೆಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಲು ಜಿಲ್ಲಾಡಳಿತ ಮತ್ತು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ರೈತ ಕಲ್ಯಾಣ ಸಂಘದ ರಾಜ್ಯ ಉಪಾಧ್ಯಕ್ಷ ಹರೀಶ್, ಹೊಟೇಲ್ ಮಾಲಿಕರಾದ ಕೆ.ಎಲ್.ಸುರೇಶ್, ಮುಖಂಡರಾದ ಕಂಚಿನಕೆರೆ ದೇವರಾಜು, ರಾಜೇಗೌಡ, ಕುಮಾರಿ ಎಂ.ಮಾನ್ಯ ಹಾಗೂ ಹೊಟೇಲ್ ಸಿಬ್ಬಂದಿ ಉಪಸ್ಥಿತರಿದ್ದರು.





