ಮಂಡ್ಯ: ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಂಡ್ಯ ಜಿಲ್ಲೆಯಲ್ಲಿ ಕೆ.ವಿ.ಶಂಕರಗೌಡ, ಎಚ್.ಕೆ.ವೀರಣ್ಣಗೌಡ, ಜಿ.ಮಾದೇಗೌಡ, ಎಸ್.ಎಂ.ಕೃಷ್ಣ ಅವರ ನಂತರದ ನಾಯಕತ್ವದಲ್ಲಿ ಅದೇ ಹಾದಿಯಲ್ಲಿ ಬೆಳೆದು ಬಂದು ಎಸ್.ಡಿ.ಜಯರಾಂ ಗರಡಿಯಲ್ಲಿ ಹೆಚ್ಚಿನ ನಾಯಕತ್ವ ರೂಪಿಸಿಕೊಂಡು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗುವ ಮೂಲಕ ಗ್ರಾಮೀಣ ಪ್ರದೇಶದ ಕೆಳಹಂತದ ಜನರಿಗೆ ನಾಯಕತ್ವ ಕೊಟ್ಟವರು ಎಂದು ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಬಣ್ಣಿಸಿದರು.
ಸಚಿವ ಎನ್.ಚಲುವರಾಯಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ವಿದ್ಯಾನಗರದಲ್ಲಿರುವ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಚಲುವರಾಯಸ್ವಾಮಿ ಅವರು ಆರೋಗ್ಯ ಸಚಿವರಾಗಿದ್ದಾಗ ಮಂಡ್ಯಕ್ಕೆ ಮೆಡಿಕಲ್ ಕಾಲೇಜನ್ನು ತಂದರು. ಕೃಷಿ ಮಂತ್ರಿಯಾಗಿ ಕೃಷಿ ವಿಶ್ವವಿದ್ಯಾನಿಲಯ ತಂದು, ನನೆಗುದಿಗೆ ಬಿದ್ದಿದ್ದ ಮೈಶುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿದ್ದಾರೆ. ಜಿಲ್ಲೆಯು ಸಮಗ್ರವಾದ ಅಭಿವೃದ್ಧಿಯತ್ತ ಸಾಗುವ ನಿಟ್ಟಿನಲ್ಲಿ ಅವರ ನಾಯಕತ್ವ ಮುನ್ನಡೆಯಲಿ ಎಂದು ಹೇಳಿದರು.
ಮಿಮ್ಸ್ ಆವರಣದ ಮಮತೆಯ ಮಡಿಲುವಿನಲ್ಲಿ ರೋಗಿಗಳಿಗೆ ಮತ್ತು ಅವಲಂಬಿತರಿಗೆ ಉಪಾಹಾರ ಹಾಗೂ ಊಟದ ವ್ಯವಸ್ಥೆ, ಹಣ್ಣು ಹಂಪಲು ವಿತರಣೆ, ಸೇವಾಕಿರಣ ವೃದ್ಧಾಶ್ರಮದ ವೃದ್ಧರಿಗೆ ಮಡಿವಾಳ ಸಮಾಜದ ಕಾಂಗ್ರೆಸ್ ಮುಖಂಡ ಹಳುವಾಡಿ ವೆಂಕಟೇಶ್ ನೇತೃತ್ವದಲ್ಲಿ ಬೆಡ್ಶೀಟ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ ಮಾತನಾಡಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ರಾಜಕಾರಣದಲ್ಲಿ ಇನ್ನೂ ಉತ್ತಮ ಅವಕಾಶಗಳು ಲಭಿಸಲಿ ಎಂದು ಹಾರೈಸಿದರು.
ಮಾಜಿ ಶಾಸಕ ಎಚ್.ಬಿ.ರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ನೀಲಾಮೂರ್ತಿ, ವಿಜಯಲಕ್ಷ್ಮಿ ರಘುನಂದನ್, ಬೇಲೂರು ಸೋಮಶೇಖರ್, ಕೆರಗೋಡು ಸೋಮಶೇಖರ್, ಅಭಿಲಾಶ್, ಅಪ್ಪಾಜಿಗೌಡ, ಶ್ರೀಧರ್, ನವೀನ್, ಶಂಕರಲಿಂಗೇಗೌಡ, ದೀಪಕ್, ಶಿವನಂಜು, ಸುಂಡಹಳ್ಳಿ ಮಂಜುನಾಥ್, ಎಂ.ಎಸ್.ಚಿದಂಬರ್, ಸಿ.ಎಂ.ದ್ಯಾವಪ್ಪ, ಚಂದಗಾಲು ವಿಜಯ್ಕುಮಾರ್, ಕೃಷ್ಣ, ನಾಗೇಶ್, ಸೋಮಶೇಖರ್ ಇತರರು ಹಾಜರಿದ್ದರು.





