ಮಂಡ್ಯ : ಕೇಂದ್ರ ಸರ್ಕಾರವು ಜಾತಿಗಣತಿ ನಡೆಸುವ ಘೋಷಣೆ ಮಾಡಿದ್ದು, ಗಣತಿಯಲ್ಲಿ ಒಕ್ಕಲಿಗರು ತಮ್ಮ ಉಪಜಾತಿಗಳನ್ನು ಕಡ್ಡಾಯವಾಗಿ ನಮೂದಿಸಿ, ಇಡಬ್ಲ್ಯೂಎಸ್ (ಆರ್ಥಿಕವಾಗಿ ಹಿಂದುಳಿದವರು) ಮೀಸಲಾತಿ ಪಡೆಯಲು ಮುಂದಾಗಬೇಕು ಎಂದು ಒಕ್ಕಲಿಗ ಧರ್ಮ ಮಹಾಸಭಾದ ಸಂಸ್ಥಾಪಕರಾದ ಸಿದ್ದರಾಮ ಚೈತನ್ಯ ಸ್ವಾಮೀಜಿ ಕರೆ ನೀಡಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿಯಲ್ಲಿ ಒಕ್ಕಲಿಗರು ಸರಿಯಾಗಿ ತಮ್ಮ ಉಪಜಾತಿಗಳನ್ನು ಕಡ್ಡಾಯವಾಗಿ ಬರೆಸುವ ಮೂಲಕ ಸರ್ಕಾರದ ಮೀಸಲಾತಿ, ವಿವಿಧ ಸವಲತ್ತುಗಳನ್ನು ಪಡೆದು ಉಪಜಾತಿಗಳ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು ಎಂದು ಕೋರಿದರು.
ರಾಜ್ಯ ಸರ್ಕಾರ ನಡೆಸಿದ ಕಾಂತರಾಜು ಆಯೋಗದ ವರದಿಯು ಸಂವಿಧಾನ ವಿರೋಧಿ ಮತ್ತು ಅವೈಜ್ಞಾನಿಕವಾಗಿದ್ದು, ಒಕ್ಕಲಿಗ ಸಮುದಾಯಕ್ಕೆ ಮಾರವಾಗಿದೆ. ಮಂಡ್ಯ ಜಿಲ್ಲೆಯ ತಾಲೂಕೊಂದರಲ್ಲೇ ೧ ಲಕ್ಷಕ್ಕೂ ಹೆಚ್ಚು ಗಂಗಟರ್ ಒಕ್ಕಲಿಗರಿದ್ದು, ರಾಜ್ಯವಿಡಿ ೮೪,೦೦೦ ಮಾತ್ರ ಇರುವುದಾಗಿ ತೋರಿ, ಇತರ ಉಪಜಾತಿಗಳಲ್ಲಿ ತಪ್ಪಾದ ಅಂಕಿ ಅಂಶ ನೀಡಿ, ಒಕ್ಕಲಿಗರನ್ನು ಅವಸಾನದಂಚಿಗೆ ತಳ್ಳುವ ವರದಿ ಮಂಡಿಸಲಾಗಿದೆ. ಸರ್ಕಾರ ಈ ವರಿದಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ಸಮುದಾಯದ ಗಂಗಟಕಾರ್, ಮರಸು, ದಾಸ, ಹಳ್ಳಿಕಾರ, ಸರ್ಪ ಒಕ್ಕಲಿಗ ಉಪಜಾತಿಗಳಿಗೆ ಶೇ ೧೦ರಷ್ಟು ಇಡಬ್ಲ್ಯೂಎಸ್ (ಆರ್ಥಿಕವಾಗಿ ಹಿಂದುಳಿದವರು) ಮೀಸಲಾತಿಯ ಅವಕಾಶವಿದ್ದು, ಉಪಜಾತಿ ಸಹಿತ ಜಾತಿ ಪ್ರಮಾಣಪತ್ರವಿಲ್ಲದ ಕಾರಣ ಈ ಮೀಸಲಾತಿ ಸದ್ಬಳಕೆಯಾಗಲಿಲ್ಲ. ನಗರ ಪ್ರದೇಶದ ಒಕ್ಕಲಿಗರನ್ನು ಒಬಿಸಿ ಪಟ್ಟಿಯಿಂದ ತೆಗೆಯಲಾಗಿದ್ದು, ಈಗಲಾದರೂ ಎಚ್ಚೆತ್ತು ಉಪಜಾತಿಗಳನ್ನು ನಮೂದಿಸಿ, ಮೀಸಲಾತಿ ಸವಲತ್ತು ಪಡೆಯಬೇಕು ಎಂದರು.
ಉಪಜಾತಿಗಳ ನಮೂದನೆಯಿಂದ ಪ್ರವರ್ಗದ ಬದಲಾವಣೆಯಾಗಬಹುದೇ ಹೊರತು ಜಾತಿ ಬದಲಾಗದು, ಇಡಬ್ಲ್ಯೂಎಸ್ (ಆರ್ಥಿಕವಾಗಿ ಹಿಂದುಳಿದವರು) ಮೀಸಲಾತಿಯಲ್ಲಿ ಸವಲತ್ತುಗಳನ್ನು ಪಡೆಯಲು ಉಪಜಾತಿಗಳನ್ನು ನಮೂದಿಸಿ ಸಹಕರಿಸಿ ಎಂದು ಮನವಿ ಮಾಡಿದರು.
ಮಹಾಸಭಾದ ರಾಜ್ಯಸಂಚಾಲಕ ಸಿ.ಎಂ.ಕ್ರಾಂತಿಸಿಂಹ ಮಾತನಾಡಿ, ಅರ್ಹ ಮೀಸಲಾತಿ ಪಡೆಯುವ ಸಂಬಂಧ ರಾಜ್ಯಾದ್ಯಂತ ವಿವಿಧ ಒಕ್ಕಲಿಗ ಉಪಜಾತಿಗಳನ್ನು ಸೇರಿಸಿ ಜಾಗೃತಿ ಆಂದೋಲನ ನಡೆಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಆನಂದ್ಕುಮಾರ್, ಜಿಲ್ಲಾ ಸಂಚಾಲಕ ಕೆ.ಪಿ.ರಕ್ಷಿತ್ಗೌಡ, ನಾಡಪ್ರಭು ಕೆಂಪೇಗೌಡರ ಯುವ ಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ ನರಸಿಂಹೇಗೌಡ, ಕಿರಣ್ಕುಮಾರ್ಗೌಡ ಇದ್ದರು.





