ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಇದು ರಾಜಕೀಯ ಭೇಟಿ ಆಗಿರಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಹನಿಟ್ರ್ಯಾಪ್ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ಯಾರು ಯಾರನ್ನು ಭೇಟಿ ಮಾಡಬೇಡಿ ಎನ್ನುವುದಕ್ಕೆ ಆಗಲ್ಲ. ಅದು ಅವರ ವೈಯಕ್ತಿಕ ಭೇಟಿ. ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ಮುಖಂಡರು ಹಾಗೂ ಮಂತ್ರಿಗಳು. ಆದರೆ ಕುಮಾರಸ್ವಾಮಿ ಹಾಗೂ ಸತೀಶ್ ಜಾರಕಿಹೋಳಿ ಭೇಟಿ ರಾಜಕೀಯ ಭೇಟಿ ಆಗಿರಲ್ಲ. ರಾಜಕೀಯವಾಗಿ ಕುಮಾರಸ್ವಾಮಿಯವರನ್ನು ಸತೀಶ್ ಜಾರಕಿಹೊಳಿ ಭೇಟಿ ಮಾಡುವ ಅವಶ್ಯಕತೆಯಿಲ್ಲ ಎಂದರು.
ಇನ್ನು ಹನಿಟ್ರ್ಯಾಪ್ ವಿಚಾರವಾಗಿ ಮಾತನಾಡಿದ ಅವರು, ಅವರ ಮನೆಯಲ್ಲಿ ಸಿಸಿ ಕ್ಯಾಮರಾ ಇಲ್ಲದಿರೋದು ನನಗೆ ಗೊತ್ತಿಲ್ಲ. ಗೃಹ ಸಚಿವರು ತನಿಖಾಧಿಕಾರಿಗೆ ದೂರು ಕೊಡಿ ಎಂದಿದ್ದಾರೆ. ದೂರು ಕೊಟ್ಟ ಬಳಿಕ ಕಾನೂನು ಬದ್ಧವಾಗಿ ತನಿಖೆ ಮಾಡಲು ಸಿಎಂ ಜೊತೆ ಮಾತಾಡುತ್ತೇವೆ ಎಂದಿದ್ದಾರೆ. ಸಿಎಂ ಸಹ ಉನ್ನತ ಮಟ್ಟದ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ. ಪಕ್ಷದಲ್ಲಿ ಮುಜುಗರ ಆಗುತ್ತೆ ಆಗಲ್ಲ ಎಂಬ ಮಾತಿಲ್ಲ. ಅಸೆಂಬ್ಲಿಯಲ್ಲಿ ಈ ಬಗ್ಗೆ ವಿರೋಧ ಪಕ್ಷದವರು ಚರ್ಚೆ ಮಾಡಿದ್ದಾರೆ. ಕೇಂದ್ರದ ಮಟ್ಟದವರು ಈ ಹನಿಟ್ರ್ಯಾಪ್ನಲ್ಲಿ ಇದ್ದಾರೆ ಎಂದಿದ್ದಾರೆ. ಕಳೆದ ಒಂದು ವರ್ಷದಲ್ಲಿ ಹಲವರು ಸ್ಟೇ ತಂದಿರೋದೆ ಇದಕ್ಕೆ ಕಾರಣ. ಅದನ್ನೆಲ್ಲಾ ನೋಡಿ ಹೀಗೆ ಚರ್ಚೆ ಮಾಡಿದ್ದಾರೆ. ತನಿಖೆ ಮಾಡಿದರೆ ತಪ್ಪೇನು ಇಲ್ಲ ಎಂದರು.





