ಮಂಡ್ಯ: ಕಳೆದ ಬಾರಿ ಬರಗಾಲ ಎದುರಿಸಿದ್ದ ಕರ್ನಾಟಕಕ್ಕೆ ಈ ಬಾರಿ ವರುಣಾ ಕೃಪಾ ತೋರಿದ್ದಾನೆ. ಅದರಂತೆ ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಕೆರೆ, ಕಟ್ಟೆ ಹಾಗೂ ಜಲಾಶಯಗಳಿಗೆ ಜೀವ ಕಳೆ ಬಂದಿದೆ.
ಡೆತ್ ಸ್ಟೋರೇಜ್ ತಲುಪಿದ್ದ ಕಾವೇರಿಗೆ ನೀರು ಹರಿದು ಬರುತ್ತಿದ್ದು, ಕಾವೇರಿ ಕೊಳ್ಳದ ಜನರಲ್ಲಿ ಸಂತಸ ಮನೆ ಮಾಡಿದೆ. ಈ ನಡುವೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿದೆ.
ಇಂದು(ಜು.11) ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಸಭೆಯಲ್ಲಿ ಇದೇ ಜುಲೈ 12 ರಿಂದ 31 ರವರೆಗೆ ಪ್ರತಿನಿತ್ಯ ತಮಿಳುನಾಡಿಗೆ 1 ಟಿಎಂಸಿ ಕಾವೇರಿ ನೀರು ಹರಿಸುವಂತೆ ಆದೇಶ ಮಾಡಿದೆ.
ಸಭೆಯಲ್ಲಿ ವಾದ ಮಾಡಿದ ತಮಿಳುನಾಡು, ಕಳೆದ ವರ್ಷ ಕರ್ನಾಟಕ ಸರಿಯಾಗಿ ತಮಿಳುನಾಡಿಗೆ ನೀರು ಹರಿಸಿಲ್ಲ. ಪ್ರಸಕ್ತ ಜಲವರ್ಷದಲ್ಲಿ ಮುಂಗಾರು ಮಳೆ ಸಾಮಾನ್ಯವಾಗಿದೆ. ಕೆಆರ್ಎಸ್ ಡ್ಯಾಂನಲ್ಲಿ ನೀರು ಸಂಗ್ರಹವಾಗಿದೆ. ಹೀಗಾಗಿ ನೀರು ಬಿಡುವಂತೆ ಶಿಫಾರಸ್ಸು ಮಾಡುವಂತೆ ಸಿಡ್ಬ್ಲೂಆರ್ಸಿ ಗೆ ಮನವಿ ಮಾಡಿದೆ.
ಇದಕ್ಕೆ ಪ್ರತಿಯಾಗಿ ಕರ್ನಾಟಕವೂ ಸಹ ಕಾವೇರಿ ನೀರಿನ ಕೊರತೆ ಇದೆ. ರಾಜ್ಯಕ್ಕೆ ಶೇ28 ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ ನೀರು ಬಿಡಲು ಆಗುವುದಿಲ್ಲ. ಈಗಲೇ ನೀರು ಬಿಡುವಂತೆ ಶಿಫಾರಸ್ಸು ಮಾಡಬೇಡಿ ಎಂದು ಮನವಿ ಮಾಡಿತು.
ಎರಡು ರಾಜ್ಯಗಳ ವಾದ-ಪ್ರತಿವಾದ ಆಲಿಸಿದ ಸಿಡ್ಬ್ಲೂಆರ್ಸಿ, ಪ್ರತಿನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿ ಆದೇಶ ಹೊರಡಿಸಿದೆ.