Mysore
27
haze

Social Media

ಸೋಮವಾರ, 30 ಮಾರ್ಚ್ 2026
Light
Dark

ಅಂಚೆ ಮತ ಎಣಿಕೆಯನ್ನು ಜಾಗರೂಕತೆಯಿಂದ ನಡೆಸಿ : ಡಾ. ಕುಮಾರ

ಮಂಡ್ಯ:  ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಮತ ಎಣಿಕೆ ಕಾರ್ಯ ಜೂನ್ 4 ರಂದು ನಡೆಯಲಿದ್ದು, ಇವಿಎಂ ಮತ ಎಣಿಕೆ ಬಳಿಕ ಅಂಚೆ ಮತಪತ್ರಗಳ ಎಣಿಕೆಯು ಸಹ ಬಹಳ ಜಾಗರೂಕತೆಯಿಂದ ನಡೆಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅಂಚೆ ಮತ ಎಣಿಕೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು.

ಇಂದು(ಮೇ.27) ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಅಂಚೆ ಮತ ಎಣಿಕೆ ಅಧಿಕಾರಿ/ ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ಚುನಾವಣಾ ತರಬೇತಿಯಲ್ಲಿ ಮಾತನಾಡಿದ ಅವರು, ಅಂಚೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಒಟ್ಟು 11 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಟೇಬಲ್ ಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಅಂಚೆ ಮತ ಪತ್ರ ಎಣಿಕೆಯ ಸಹಾಯಕ ಚುನಾವಣಾ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಅಂಚೆ ಮತ ಎಣಿಕೆಯು ಬಹಳ ಸೂಕ್ಷ್ಮವಾಗಿದ್ದು, ಎಲ್ಲಾ ಮತ ಎಣಿಕೆ ಅಧಿಕಾರಿಗಳು, ಮೇಲ್ವಿಚಾರಕರುಗಳು ಹಾಗೂ ಸಿಬ್ಬಂದಿಗಳು ಗಂಭೀರವಾಗಿ ಪರಿಗಣಿಸಿ ಸಂಪೂರ್ಣ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಮತ ಎಣಿಕೆಯ  ಅಧಿಕಾರಿ ಹಾಗೂ ಸಿಬ್ಬಂದಿಗಳು ತರಬೇತಿಯಲ್ಲಿ ಸರಿಯಾದ ಸಲಹೆ ಹಾಗೂ ಮಾರ್ಗದರ್ಶನವನ್ನು ಪಡೆಯಿರಿ. ಮತ ಎಣಿಕೆಯ ದಿನದಂದು ಕೌಂಟಿಂಗ್ ಟೇಬಲ್ ನ ಸಂಖ್ಯೆ, ಅಧಿಕಾರಿ ಹೆಸರು, ಎಣಿಕೆ ಮೇಲ್ವಿಚಾರಕರ ಹೆಸರು,  ಪೋಸ್ಟಲ್ ಬ್ಯಾಲೆಟ್ ಬಂಡಲ್ ನ ಒಟ್ಟು ಸಂಖ್ಯೆಯನ್ನು ನೀಡಲಾಗುವ ನಮೂನೆಯಲ್ಲಿ ತಪ್ಪದೇ ನಮೂದಿಸಬೇಕು ಎಂದು ತಿಳಿಸಿದರು.

ಮತ ಎಣಿಕೆ ಮೇಲ್ವಿಚಾರಕರ ಜವಾಬ್ದಾರಿಯು ಬಹಳ ಮುಖ್ಯವಾಗಿದ್ದು, ಮತ ಎಣಿಕೆಯ ದಿನ ಎಲ್ಲಾ ಸಿಬ್ಬಂದಿಗಳು ನಿಗದಿಪಡಿಸುವ ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ಮತ ಎಣಿಕೆಯನ್ನು ನಿಖರವಾಗಿ ನಮೂದಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ. ಎಚ್. ಎಲ್. ನಾಗರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:
error: Content is protected !!