Mysore
24
clear sky

Social Media

ಗುರುವಾರ, 30 ಏಪ್ರಿಲ 2026
Light
Dark

ಫೈನಾನ್ಸ್‌ ಕಿರುಕುಳ ತಪ್ಪಿಸಿ: ದಸಂಸ ಆಗ್ರಹ

ಮಂಡ್ಯ : ಜಿಲ್ಲೆ ಸೇರಿದಂತೆ ರಾಜ್ಯದ್ಯಂತ ಮೈಕ್ರೋ ಫೈನಾನ್ಸ್ ಸಾಲ ಸಂಸ್ಥೆಗಳ ಹಾವಳಿಯನ್ನು ತಪ್ಪಿಸಿ ಮಹಿಳೆಯರ ಮಾನ ಪ್ರಾಣವನ್ನು ರಕ್ಷಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷ ವೆಂಕಟ ಗಿರಿಯಯ್ಯ ಆಗ್ರಹಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಲೂಟಿ ಮಾಡುವ ಫೈನಾನ್ಸ್ ಸಂಸ್ಥೆಗಳು ದಾಂಗುಡಿ ಇಡುತ್ತಿವೆ. ಕಡು ಬಡವರು, ಮಹಿಳೆಯರು ಇದರಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಮಳವಳ್ಳಿಯಲ್ಲಿ ಮಹಿಳೆಯೊಬ್ಬರು ಫೈನಾನ್ಸ್ ಸಂಸ್ಥೆಯ ಹಾವಳಿ ತಡೆಯದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಫೈನಾನ್ಸ್ ಸಂಸ್ಥೆಗಳ ವಿರುದ್ಧ ಹೊಳಲು, ಮಳವಳ್ಳಿ ಸೇರಿದಂತೆ ಕೆಲವೆಡೆ ಪ್ರತಿಭಟನೆ ನಡೆದಿದೆ.  ಮಳವಳ್ಳಿಯಲ್ಲಿ ಹೆಣ್ಣುಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಹೊಣೆಯನ್ನು ಜಿಲ್ಲಾಡಳಿತ ಮತ್ತು ಸರ್ಕಾರ ಹೊರಬೇಕು ಎಂದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಜಿಲ್ಲಾಡಳಿತ ಮತ್ತು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ಹೆಣ್ಣುಮಗಳ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಿ ,ಆಕೆಯ ಕುಟುಂಬದವರಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ಕೇವಲ ಏಳುನೂರು ರೂಪಾಯಿ ಸಾಲ ಮರುಪಾವತಿಗಾಗಿ ಫೈನಾನ್ಸ್ ಸಂಸ್ಥೆ ಆ ಹೆಣ್ಣು ಮಗಳಿಗೆ ಕಿರುಕುಳ ನೀಡಿದ್ದು ಇದನ್ನು ಸಹಿಸಲಾರದೆ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಿಲ್ಲೆಯ ರೈತರಿಗೂ ಕೂಡ ಈ ಸಂಸ್ಥೆಗಳು ಕಿರುಕುಳ ನೀಡುತ್ತಿದೆ. ಆದ್ದರಿಂದ ಈ ಸಂಸ್ಥೆಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ವಹಿಸುವಂತೆ ಅವರು ಒತ್ತಾಯಿಸಿದರು .

ಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಬಿ ಆನಂದ್ ,ಜಿಲ್ಲಾ ಕಾರ್ಯದರ್ಶಿ ಸುರೇಶ್ ಕುಮಾರ್ ,ಮೈಸೂರು ವಿಭಾಗೀಯ ಸಂಚಾಲಕ ಅನಿಲ್ ಕುಮಾರ್ ಸೇರಿದಂತೆ ಇತರರಿದ್ದರು.

Tags:
error: Content is protected !!