Mysore
22
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮಂಡ್ಯ | 25 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು : ಜಿಲ್ಲಾಧಿಕಾರಿ ಕುಮಾರ

ಮಂಡ್ಯ : ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ, ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ. ರೈತರು ನಿರಾತಂಕವಾಗಿ ಕೃಷಿ ಕೆಲಸಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಹೇಳಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 4,200 ಮೆಟ್ರಿಕ್ ಟನ್ ಯೂರಿಯಾ ಲಭ್ಯವಿದ್ದು, ಎಂದು ತಿಳಿಸಿದರು.

ಈಗಾಗಲೇ ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲಗಳಲ್ಲಿ ನಾಟಿ ಮಾಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಭಾಗದಲ್ಲೂ ನಾಟಿ ಕೆಲಸ ಶುರುವಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳು ರೈತರಿಗೆ ನಾಟಿ ಸಂದರ್ಭದಲ್ಲಿ ಯೂರಿಯಾ ಬದಲು ಎನ್.ಪಿ.ಕೆ ಕಾಂಪ್ಲೆಕ್ಸ್ ಅನ್ನು ಬಳಸುವಂತೆ ಜಾಗೃತಿ ಮೂಡಿಸಿ ಎಂದರು.

ರಸಗೊಬ್ಬರ ಮಾರಾಟಗಾರೊಂದಿಗೆ ಹೋಬಳಿ ಮಟ್ಟದ ಸಭೆ ನಡೆಸಿ ಸೊಸೈಟಿ ಗಳಲ್ಲಿ ರಸಗೊಬ್ಬರ ದಾಸ್ತಾನಿನ ಪ್ರಮಾಣ ಹಾಗೂ ದರವನ್ನು ಕಡ್ಡಾಯವಾಗಿ ನಮೂದಿಸಬೇಕು, ಹಾಗೂ ಯೂರಿಯಾ ಅತಿಯಾದ ಬಳಕೆಯಿಂದ ಬೆಳೆಯ ಗುಣಮಟ್ಟ ಕಡಿಮೆಯಾಗುವುದರ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿ‌ಸಿ ಎಂದು ಹೇಳಿದರು.

ಪಿ.ಓ.ಎಸ್ ಆನ್ ಲೈನ್ ನಲ್ಲಿ ಭರ್ತಿ ಮಾಡುವ ಹಾಗೂ ಲಭ್ಯವಿರುವ ಭೌತಿಕ ದಾಸ್ತಾನಿಗೂ ತಾಳೆ ಇರಬೇಕು, ಸಂಬಂಧ ಪಟ್ಟ ಅಧಿಕಾರಿಗಳು ಆಗಾಗ ಪರೀಶೀಲನೆ ನಡೆಸಬೇಕು. ಕೃತಕವಾಗಿ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯ ಸನ್ನಿವೇಶ ಸೃಷ್ಠಿಯಾಗಸಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ರಸಗೊಬ್ಬರವನ್ನು ಅನಾಧಿಕೃತವಾಗಿ ಮಾರಾಟ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧ ಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಪರವಾನಿಗೆಯನ್ನು ರದ್ದು ಪಡಿಸಬೇಕು ಎಂದು ತಾಕೀತು ಮಾಡಿದರು.

ರಸಗೊಬ್ಬರ ದಾಸ್ತಾನು ಹಾಗೂ ಮಾರಾಟ ಮಳಿಗೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಬಗ್ಗೆ ನಿಗಾ ವಹಿಸಲು ಈಗಾಗಲೇ ತಂಡಗಳನ್ನು ರಚಿಸಲಾಗಿದೆ ಸಂಬಂಧ ಪಟ್ಟ ತಾಲ್ಲೂಕಿಗೆ ತಂಡಗಳು ರಸಗೊಬ್ಬರ ದಾಸ್ತಾನು ಮಳಿಗೆಗಳು ಹಾಗೂ ಮಾರಾಟ ಮಳಿಗೆಗಳಿಗೆ ನಿಗದಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ಮೇವು ವೇಗವಾಗಿ ಬೆಳೆಯಲು ರೈತರು ಹೆಚ್ಚು ಯೂರಿಯಾ ಬಳಸುತ್ತಾರೆ, ಮೇವು ವೇಗವಾಗಿ ಬೆಳೆದರೂ ಅದರಲ್ಲಿ ಪೌಷ್ಟಿಕಾಂಶಗಳ ಕೊರತೆ ಇರುತ್ತದೆ ಅದರಿಂದ ಹಾಲಿನ ಗುಣಮಟ್ಟದ ಪ್ರಮಾಣ ಕಡಿಮೆಯಾಗುತ್ತದೆ ಇದರ ಕುರಿತಾಗಿ ರೈತರಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಜಾಗೃತಿ ಮೂಡಿಸುವ ಕೆಲಸವಾಗಬೇಕು ಇದರಿಂದಾಗಿ ಯೂರಿಯಾ ಬದಲು ನ್ಯಾನೋ ಯೂರಿಯಾ ಬಳಸಬೇಕು ಎಂದರು.

ಜಿಲ್ಲೆಯಲ್ಲಿರುವ 31 ಸಾವಿರ ರೇಷ್ಮೆ ಬೆಳೆಗಾರರಿಗೆ ಯೂರಿಯಾ ಬಳೆಕೆಯನ್ನು ಹೆಚ್ಚು ಮಾಡುವುದರಿಂದ ರೇಷ್ಮೆ ನೂಲು ತನ್ನ ದೃಢತೆಯನ್ನು ಕಳೆದುಕೊಳ್ಳುತ್ತದೆ ಎಂಬುದರ ಕುರಿತಾಗಿ ರೇಷ್ಮೆ ಬೆಳೆಗಾರರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ರೈತರು ನಾಟಿ ಸಂದರ್ಭದಲ್ಲಿ ಹೆಚ್ಚಾಗಿ ಯೂರಿಯಾ ಬಳಕೆ ಮಾಡುವುದರಿಂದ ಬೆಳೆಯ ಗುಣಮಟ್ಟ ಕುಂದುತ್ತದೆ ಆದ್ದರಿಂದ ನಾಟಿ ಸಂದರ್ಭದಲ್ಲಿ ಕಾಂಪ್ಲೆಕ್ಸ್, ಹಸಿರೆಲೆ ಗೊಬ್ಬರ ಮತ್ತು ಸಾವಯವ ಗೊಬ್ಬರವನ್ನು ಬಳಕೆ ಮಾಡಬೇಕು ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರಸ್ತುತ ಅಗತ್ಯಕ್ಕಿಂತ ಹೆಚ್ಚಾಗಿ ಯೂರಿಯಾವನ್ನು ರೈತರು ಬಳಕೆ ಮಾಡುತ್ತಿದ್ದಾರೆ ಇದರಿಂದ ಬೆಳೆಗಳು ಗುಣಮಟ್ಟ ಕಮ್ಮಿಯಾಗುತ್ತದೆ, ಯೂರಿಯಾ ಬದಲು ಕಾಂಪ್ಲೆಕ್ಸ್ ಬಳಸಿ ಎಂದು ತಿಳಿಸಿದರು.

ಜಿಲ್ಲೆಗೆ 7ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದೆ, ಪ್ರಸ್ತುತ ಜಿಲ್ಲೆಗೆ ಬಿತ್ತನೆ ಬೀಜದ ದಾಸ್ತಾನು ಇದ್ದು, ಯಾವುದೇ ಕೊರತೆ ಇಲ್ಲ ಎಂದು ಹೇಳಿದರು.

ಸಭೆಯಲ್ಲಿ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ದಿನೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ ಕೃಷಿ ಇಲಾಖೆ ಉಪನಿರ್ದೇಶಕ ಮುನೇಗೌಡ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!