ಸಂಚಾರಕ್ಕೆ ಅಡ್ಡಿ; ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಮಳವಳ್ಳಿ: ತಾಲ್ಲೂಕಿನ ಕಿರುಗಾವಲಿನ ಹೆದ್ದಾರಿಯಲ್ಲಿ ಕುರಿ ಮತ್ತು ಮೇಕೆಗಳ ಸಂತೆ ನಡೆಯುತ್ತಿರುವುದರಿಂದ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಾಜ್ಯದಾದ್ಯಂತ ಹಸುಗಳಿಗೆ ಚರ್ಮದ ಗಂಟುರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅ. ೧೩ ರಿಂದ ಡಿಸೆಂಬರ್ ೧೦ ರವರೆಗೆ ರೋಗ ಹರಡದಂತೆ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಂತೆಗಳು ನಡೆಯುವುದನ್ನು ರದ್ದುಪಡಿಸಿರುವುದರಿಂದ ಪಕ್ಕದಲ್ಲೇ ಸಂತೆಯ ಜಾಗವಿದ್ದರೂ ಅಲ್ಲಿ ಸಂತೆ ನಡೆಸಲಾಗದೆ ಹಳ್ಳಿಗಳಿಂದ ಬರುವ ರೈತರು ಮೇಕೆ ಸಾಕಾಣಿಕೆದಾರರು, ಕುರಿ ಸಾಕಾಣಿಕೆದಾರರು ರಾಜ್ಯ ಹೆದ್ದಾರಿಯಲ್ಲಿ ನಿಂತು ಮಾರಾಟ ಮಾಡುತ್ತಿರುವುದರಿಂದ ಮೈಸೂರು, ಮಳವಳ್ಳಿಗೆ ಹೋಗುವ ಮುಖ್ಯರಸ್ತೆ ಕುರಿ ಮೇಕೆಗಳ ಸಂತೆಯಾಗಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನಾದರೂ ಸ್ಥಳೀಯ ಆಡಳಿತ, ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡು ಸಂಚಾರಕ್ಕೆ ಅಡ್ಡಿಯಾಗದಂತೆ ರೈತರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ಕಿರುಗಾವಲು ಗ್ರಾಮದ ಯುವ ಮುಖಂಡ ರಾಜು ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.