ತಿ.ನರಸೀಪುರ : ತಾಲ್ಲೂಕಿನ ಮದ್ಗಾರ ಲಿಂಗಯ್ಯನಹುಂಡಿ ಗ್ರಾಮದ ವಿದ್ಯಾರ್ಥಿ ಮಂಜುನಾಥ್ ಚಿರತೆ ದಾಳಿಗೆ ಸಿಕ್ಕಿ ಸಾವನ್ನಪ್ಪಿದ್ದರೂ ಅರಣ್ಯ ಇಲಾಖೆ ಚಿರತೆ ಹಿಡಿಯುವಲ್ಲಿ ವಿಫಲರಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಯುವಕನನ್ನು ಬಲಿ ಪಡೆದ ಘಟನೆ ಮಾಸುವ ಮುನ್ನವೇ ವೀರಶೈವ ವಿರಕ್ತ ಮಠದ ಮುಂಭಾಗ ಶನಿವಾರ ರಾತ್ರಿ ಸಿಸಿ ಕ್ಯಾಮೆರಾದಲ್ಲಿ ಚಿರತೆ ಕಾಣಿಸಿಕೊಳ್ಳುವ ಮೂಲಕ ಸುತ್ತಮುತ್ತಲಿನ ಗ್ರಾಮದ ಜನತೆಯಲ್ಲಿ ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ.
ಯುವಕನನ್ನು ಬಲಿ ತೆಗೆದುಕೊಂಡ ಚಿರತೆ ಬೆಟ್ಟದ ತಪ್ಪಲಿನಲ್ಲಿರುವ ಮಠದ ಬಳಿ ಪತ್ತೆಯಾಗಿದೆ.. ಮಠದ ಗೇಟ್ ಬಳಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದ್ದಾರೆ. ಆದರೆ ಈವರೆಗೆ ಚಿರತೆ ಬೋನಿಗೆ ಬೀಳದಿರುವುದು ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗೆ ಚಿರತೆ ಕಾಣಿಸಿಕೊಂಡ ವಿಡಿಯೋ ಕಳಿಸಿದ್ದೆ. ಅರಣ್ಯ ಇಲಾಖೆಯ ಅಧಿಕಾರಿ ಶಶಿಧರ್ ಹಾಗೂ ಯಮುನಾ ಮಠಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಠದ ಸಮೀಪ ಬೋನನ್ನು ಇಟ್ಟಿದ್ದಾರೆ. ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಕೂಲಿ ಕೆಲಸಕ್ಕೂ ಹೋಗಲು ಭಯಭೀತರಾಗಿದ್ದಾರೆ. ಕೂಲಿ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ.
– ಶ್ರೀ ಗೌರಿಶಂಕರ ಸ್ವಾಮೀಜಿ, ವೀರಶೈವ ಮಠ, ಎಂ.ಎಲ್.ಹುಂಡಿ.