ಸಿದ್ದಾಪುರ : ಕಾಡುಕೋಣ ಡಿಕ್ಕಿ ಹೊಡೆದ ಪರಿಣಾಮ ವಾಹನ ಪಲ್ಟಿಯಾದ ಘಟನೆ ಸಮೀಪದ ಕರಡಿಗೋಡು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಕಾಫಿ ತೋಟದಿಂದ ಏಕಾಏಕಿ ರಸ್ತೆ ದಾಟಲು ಬಂದ ಕಾಡುಕೋಣ ಕರಡಿಗೋಡು ಸರ್ಕಾರಿ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗೆ ತೆರಳುತ್ತಿದ್ದ ವಾಹನಕ್ಕೆ ಅಡ್ಡ ಬಂದಿದೆ. ವಾಹನಕ್ಕೆ ಕಾಡುಕೋಣ ಡಿಕ್ಕಿಯಾದ ಪರಿಣಾಮ ಗೂಡ್ಸ್ ವಾಹನ ಸಂಪೂರ್ಣ ಜಖಂಗೊಂಡಿದೆ. ವಾಹನದ ಚಾಲಕ ಹಾಗೂ ಓರ್ವ ಕಾರ್ಮಿಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ವಿರಾಜಪೇಟೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ, ಉಪವಲಯ ಅರಣ್ಯಧಿಕಾರಿ ಸಂಜೀತ್ ಸೋಮಯ್ಯ, ತಿತಿಮತಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಗಂಗಾಧರ್, ಆನೆ ಚೌಕೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ದೆವರಾಜ್ ಮತ್ತು ಆರ್ಆರ್ಟಿ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಾಯಗೊಂಡ ಕಾಡುಕೋಣಕ್ಕೆ ಆನೆಚೌಕೂರು ವನ್ಯ ಜೀವಿ ಸಂರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ನಿರ್ದರಿಸಲಾಗಿದ್ದು, ಅಲ್ಲಿಗೆ ಕೊಂಡೊಯ್ಯಲಾಗಿದೆ.





