ಕಿಡ್ನಿ ಸಮಸ್ಯೆಗೆ ಇನ್ನೂ ಹೊರಜಿಲ್ಲೆಯ ಆಸ್ಪತ್ರೆಗಳನ್ನೇ ಅವಲಂಭಿಸುವ ಪರಿಸ್ಥಿತಿ; ತಜ್ಞ ವೈದ್ಯರ ನೇಮಕಕ್ಕೆ ಒತ್ತಾಯ
ನವೀನ್ ಡಿಸೌಜ
ಮಡಿಕೇರಿ: ಕೊಡಗು ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಆಗ್ರಹದ ನಡುವೆ ಜಿಲ್ಲೆಯಲ್ಲಿ ಮೂತ್ರಪಿಂಡ ತಜ್ಞ ವೈದ್ಯರ ನೇಮಕವಾಗಬೇಕೆನ್ನುವ ಒತ್ತಾಯ ಕೇಳಿಬಂದಿದೆ.
ಕೊಡಗು ಜಿಲ್ಲಾಸ್ಪತ್ರೆ ಮೆಡಿಕಲ್ ಕಾಲೇಜು ಬೋಧಕ ಆಸ್ಪತ್ರೆಯಾದ ಬಳಿಕ ಹಲವು ಸೇವೆಗಳು ಆರಂಭವಾಗಿದೆಯಾದರೂ ಮೂತ್ರ ಪಿಂಡ ಸಮಸ್ಯೆಗೆ ಇನ್ನೂ ಹೊರಜಿಲ್ಲೆಯ ಆಸ್ಪತ್ರೆಗಳನ್ನೇ ಅವಲಂಭಿಸುವ ಪರಿಸ್ಥಿತಿಯಿರುವುದರಿಂದ ಜನತೆ ಸಮಸ್ಯೆ ಎದುರಿಸುವಂತಾಗಿದೆ.
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮೂತ್ರಪಿಂಡ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ತುರ್ತಾಗಿ ಮೂತ್ರಪಿಂಡ ತಜ್ಞ ವೈದ್ಯರ ಅಗತ್ಯವಿದೆ. ಇವರ ನೇಮಕಾತಿಗೆ ಪ್ರಯತ್ನಗಳು ನಡೆಯುತ್ತಿದ್ದರೂ, ಇನ್ನೂ ಕೈಗೂಡಿಲ್ಲ. ಕೋಯಿಮ್ಸ್ನಲ್ಲಿ ಹೃದ್ರೋಗ ಘಟಕ ಆರಂಭಕ್ಕೆ ಬಿರುಸಿನ ಪ್ರಯತ್ನಗಳು ನಡೆದಿದ್ದು, ಅದರೊಂದಿಗೆ ಮೂತ್ರ ಪಿಂಡ ಸಮಸ್ಯೆಗೂ ಚಿಕಿತ್ಸೆ ಸಿಗುವಂತಾಗಬೇಕೆಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.