ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ದಿನವಿಡೀ ಎಡಬಿಡದೆ ಭಾರೀ ಮಳೆ ಸುರಿಯುತ್ತಿರುವುದರಿಂದ ಕುಶಾಲನಗರದ ಹಾರಂಗಿ ಜಲಾಶಯದ ಒಳಹರಿವಿನ ಪ್ರಮಾಣ ೧೦ ಸಾವಿರ ಕ್ಯೂಸೆಕ್ ಗೆ ಏರಿಕೆಯಾಗಿದೆ. ಕ್ಷಣ ಕ್ಷಣಕ್ಕೂ ಒಳಹರಿವು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ರಾಥ್ರಿ ೧೨ ಗಂಟೆ ಸುಮಾರಿಗೆ ಜಲಾಶಯದಿಂದ ೧೦ ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ಇದರಿಂದಾಗಿ ಕಾವೇರಿ ಮತ್ತು ಹಾರಂಗಿ ನದಿ ದಂಡೆಯಲ್ಲಿ ಪ್ರವಾಹದ ಭೀತಿ ಸೃಷ್ಠಿಯಾಗಿದೆ.
ಇನ್ನು ತಾಲೂಕಿನ ಭಾಗಮಂಡಲದಲ್ಲೂ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿರುವ ಕಾರಣ ತ್ರಿವೇಣಿ ಸಂಗಮದಲ್ಲಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇದೇ ರೀತಿ ಮಳೆ ಏನಾದ್ರೂ ಮುಂದುವರೆದರೆ ಮಡಿಕೇರಿ ನಾಪೋಕ್ಲು ರಸ್ತೆ ಕಡಿತಗೊಳ್ಳುವ ಸಾಧ್ಯತೆ ಇದೆ.
ಅಲ್ಲದೆ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಒಂದಲ್ಲ ಒಂದು ಅವಾಂತರಗಳು ಸೃಷ್ಠಿಯಾಗಿವೆ. ವಿಪರೀತ ಗಾಳಿ ಮಳೆಯಿಂದಾಗಿ ಹಲವಾರು ಗ್ರಾಮದಲ್ಲಿ ವಿದ್ಯುತ್ ಕಂಬ ಹಾಗೂ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಕೆಲ ಗ್ರಾಮಗಳಲ್ಲಿ ಕರೆಂಟ್ ಇಲ್ಲದೆ ಕಗತ್ತಲಲ್ಲೆ ದಿನ ಕಳೆಯುತ್ತಿದ್ದಾರೆ.





