Mysore
23
clear sky

Social Media

ಶನಿವಾರ, 14 ಮಾರ್ಚ್ 2026
Light
Dark

ವೈಯಕ್ತಿಕ ದ್ವೇಷ: ಕಾರ್ಮಿಕನನ್ನು ಕೊಲೆಗೈಯ್ದು ಶರಣಾದ ಆರೋಪಿ

ಚೆಟ್ಟಳ್ಳಿ: ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕನೊಬ್ಬ ಮತ್ತೊಬ್ಬ ಕಾರ್ಮಿಕನನ್ನು ಹತ್ಯೆಗೈದು ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಚೆಟ್ಟಳ್ಳಿಯ ಕೋಗಿಲಹಳ್ಳ ಎಸ್ಟೇಟ್‌ನಲ್ಲಿ ನಡೆದಿದೆ.

ಒರಿಸ್ಸಾ ಮೂಲದ ಅಶ್ವಿನಾಗೊಮಾಗೊ ಮೃತ ಕಾರ್ಮಿಕ. ಕಾರ್ಮಿಕ ಮಹೇಶ್ ಹತ್ಯೆಗೈದ ಆರೋಪಿ. ಮಾ.೨ರಂದು ಮಧ್ಯಾಹ್ನ ಸುಮಾರು ೧.೪೦ ಗಂಟೆಗೆ ಮಹೇಶ್, ಅಶ್ವಿನಾಗೊಮಾಗೊನನ್ನು ಅಂಗಡಿಗೆ ಹೋಗುವ ನೆಪದಲ್ಲಿ ಮನೆಯಿಂದ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಆದರೆ ನಂತರ ಮಹೇಶ್ ಒಬ್ಬನೇ ಮನೆಗೆ ವಾಪಸ್ಸಾಗಿದ್ದು, ಅಶ್ವಿನಾಗೊಮಾಗೊ ಮನೆಗೆ ಮರಳಿಲ್ಲ. ಸಂಜೆ ವೇಳೆಗೆ ಸಂಶಯಗೊಂಡ ಪತ್ನಿ ಹಾಗೂ ನೆರೆಹೊರೆಯವರು ಕಾಫಿ ತೋಟದಲ್ಲಿ ಹುಡುಕಾಟ ನಡೆಸಿದಾಗ, ತೋಟದ ಬೇಲಿಯ ಸಮೀಪ ಕಾಫಿ ಗಿಡದ ಕೆಳಗೆ ಮೃತದೇಹ ಪತ್ತೆಯಾಗಿದೆ.

ಮೃತದೇಹದ ಮುಖಭಾಗದಲ್ಲಿ ರಕ್ತಗಾಯಗಳು ಕಂಡು ಬಂದಿದ್ದು, ಹಳೆಯ ವೈಷಮ್ಯವೇ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ವೈಯಕ್ತಿಕ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದುದಾಗಿ ತಿಳಿದುಬಂದಿದೆ. ಬಳಿಕ ಆರೋಪಿ ಮಹೇಶ್ ಚೆಟ್ಟಳ್ಳಿ ಠಾಣೆಗೆ ಬಂದು ನಾನೇ ಕೊಲೆ ಮಾಡಿರುವುದಾಗಿ ಶರಣಾಗಿದ್ದಾನೆ.

ಈ ಕುರಿತು ಅಶ್ವಿನಾಗೊಮಾಗೊ ಪತ್ನಿ ಸುಂಭಾರಿಗಮಂಗೋ ಚೆಟ್ಟಳ್ಳಿ ಉಪಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಮಹೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಮಡಿಕೇರಿಯ ಡಿವೈಎಸ್ಪಿ ಸೂರಜ್, ಗ್ರಾಮಾಂತರ ಸಿಪಿಐ ಚಂದ್ರಶೇಖರ್, ಅಪರಾಧ ವಿಭಾಗದ ಸಿಬ್ಬಂದಿಗಳು, ಚೆಟ್ಟಳ್ಳಿ ಉಪ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

Tags:
error: Content is protected !!