ಸಿದ್ದಾಪುರ: ಇಲ್ಲಿನ ಶ್ರೀ ಮುತ್ತಪ್ಪ ದೇವಾಲಯದ 51ನೇ ವರ್ಷದ ಹಾಗೂ ಭಗವತಿ ದೇವಾಲಯದ 25ನೇ ವಾರ್ಷಿಕೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನೆರೆವೇರಿತು.
ಮುತ್ತಪ್ಪನ್ ತೆರೆ ಮಹೋತ್ಸವವನ್ನು ಸಾವಿರಾರು ಭಕ್ತರು ಆಗಮಿಸಿ ದೇವರ ಆಶೀರ್ವಾದ ಪಡೆದು ಪುನೀತರಾದರು. ಐದು ದಿನಗಳ ಕಾಲ ನಡೆದ ವಾರ್ಷಿಕೋತ್ಸವದಲ್ಲಿ ಗಣಪತಿ ಹೋಮ, ಚಂಡಿಕಾ ಹೋಮ, ದುರ್ಗಾ ಪೂಜೆ, ಆಶ್ಲೇಷಾ ಬಲಿ, ನಾಗಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಗಳೊಂದಿಗೆ ಸಂಭ್ರಮದಿಂದ ನಡೆಯಿತು.
ಈ ಬಾರಿ ಭಕ್ತರ ಹರಕೆಯ ಏಳು ವಸೂರಿ ಮಾಲ ಕೋಲವು ಕೊಡಗಿನ ಪುಣ್ಯ ನದಿ ಕಾವೇರಿಯಿಂದ ಹೊರಟು ಪಟ್ಟಣ ಪ್ರವೇಶಿಸುದಂತೆ ಸಾವಿರಾರು ಭಕ್ತರು ನಡು ರಾತ್ರಿಯಲ್ಲಿ ಬರಮಾಡಿಕೊಂಡರು.
ವರ್ಷಂಪ್ರತಿ ನಡೆಯುವ ಮುತ್ತಪ್ಪನ, ತಿರುವಪ್ಪ, ಶಾಸ್ತಪ್ಪ, ಗುಳಿಗ, ಭಗವತಿ, ವಿಷ್ಣುಮೂರ್ತಿ ಹಾಗೂ ವಸೂರಿ ಮಾಲ ತೆರೆಯನ್ನು ಭಕ್ತರು ಹರ್ಷೋದ್ಗಾರದೊಂದಿಗೆ ಕಣ್ತುಂಬಿಕೊಂಡರು.
ವಾರ್ಷಿಕೋತ್ಸವದ ಪ್ರಯುಕ್ತ ರಿಪ್ಲೇಕ್ಸನ್ ನೃತ್ಯಶಾಲೆ ನೆಲ್ಲಿಹುದಿಕೇರಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಭರತನಾಟ್ಯ ಪ್ರದರ್ಶನ ಭಕ್ತರ ಗಮನ ಸೆಳೆಯಿತು.




