ಮಡಿಕೇರಿ : ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗಧಿ ಆಗಿದೆ. ಕೊಡಗಿನ ತಲಕಾವೇರಿಯಲ್ಲಿರುವ ತೀರ್ಥ ಕುಂಡಿಕೆಯಲ್ಲಿ ಅಕ್ಟೋಬರ್ 17 ರಂದು ಮಂಗಳವಾರ ರಾತ್ರಿ 1:27ಕ್ಕೆ ಕರ್ಕಾಟಕ ಲಗ್ನದಲ್ಲಿ ಕಾವೇರಿ ತೀರ್ಥ ರೂಪದಲ್ಲಿ ಉಗಮವಾಗಲಿದೆ.
ಕಾವೇರಿಯ ಉಗಮ ಸ್ಥಳ ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಬರುತ್ತಾಳೆಂಬ ನಂಬಿಕೆ ಇದೆ. ಜೀವ ನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಮಾತೆ ಕಾವೇರಿ ಜಲರೂಪದಲ್ಲಿ ದರ್ಶನ ಕೊಡುತ್ತಾಳೆ ಎಂದು ನಂಬಲಾಗುವ ಪವಿತ್ರ ತೀರ್ಥೋದ್ಭವಕ್ಕೆ ಈಗಾಗಲೇ ಸಿದ್ದತೆ ಕಾರ್ಯಗಳ ಚರ್ಚೆ ನಡೆಸಲಾಗುತ್ತಿದೆ.
ಪ್ರತಿ ವರ್ಷವೂ ತುಲಾ ಮಾಸದಲ್ಲಿ ನಡೆಯುವ ಈ ಜಾತ್ರೆಗೆ ಸೆ.27ರಿಂದಲೇ ಸಿದ್ಧತೆ ಶುರುವಾಗುತ್ತದೆ. ಅಕ್ಟೋಬರ್ ಕಾಲಿಡುತ್ತಿದ್ದಂತೆಯೇ ಭಾಗಮಂಡಲ, ತಲಕಾವೇರಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗುತ್ತದೆ. ಇದುವರೆಗೂ ಕಾವೇರಿ ಭಕ್ತರ ಉತ್ಸಾಹಕ್ಕೆ ಯಾವುದೇ ಅಡ್ಡಿಯಾಗಿರಲಿಲ್ಲ. ಈ ಬಾರಿ ರಾತ್ರಿ ತೀರ್ಥೋದ್ಬವ ಅಗುತ್ತಿರುವುದರಿಂದ ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅಗಮಿಸುವ ನಿರೀಕ್ಷೆ ಇದೆ.





