ಮಡಿಕೇರಿ: ಅಂಗನವಾಡಿ ಮಕ್ಕಳ ಆರೋಗ್ಯ ಮತ್ತು ಕ್ರೀಡೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಭರವಸೆ ನೀಡಿದ್ದಾರೆ.
ಮಾಯಮುಡಿ ಗ್ರಾ.ಪಂ ವತಿಯಿಂದ ವ್ಯಾಪ್ತಿಯ 11 ಅಂಗನವಾಡಿಗಳಿಗೆ ಕುರ್ಚಿಗಳನ್ನು ವಿತರಿಸಿ ಮಾತನಾಡಿದ ಅವರು, ಅಂಗನವಾಡಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಗ್ರಾ.ಪಂ ಅನುದಾನದಲ್ಲಿ 11 ಅಂಗನವಾಡಿಗಳ ಮಕ್ಕಳಿಗೆ ತಲಾ 14 ಕುರ್ಚಿಗಳನ್ನು ವಿತರಿಸಲಾಗುತ್ತಿದೆ. ಪೋಷಕರು ಹಾಗೂ ಅಂಗನವಾಡಿ ಕಾರ್ಯಕರ್ತರು ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಟಾಟು ಮೊಣ್ಣಪ್ಪ ಕರೆ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಸದಪ್ಪ ಮಟಲ್ಕೋಡ್, ಉಪಾಧ್ಯಕ್ಷರಾದ ಪಿ.ಎಸ್.ಶಾಂತ, ಸದಸ್ಯರುಗಳಾದ ಹೆಚ್.ಆರ್.ಸುಶೀಲ, ಪಿ.ಕೆ.ಸರಸ್ವತಿ, ಕೆ.ಕೆ.ಸುಮಿತ್ರ ರವಿ, ಎಂ.ಪಿ.ವೀಣಾ, ಸಿ.ಕೆ.ಪೂವಯ್ಯ, ಕೆ.ಕೆ.ಶಬರೀಶ್, ಪಿ.ಮುತ್ತಮ್ಮ, ಸಿಬ್ಬಂದಿಗಳಾದ ಆಶಾ ಸೂದನ್, ಸಚಿತಾ, ಗುರು ಹಾಗೂ ಶ್ರೀಜೇಶ್ ಉಪಸ್ಥಿತರಿದ್ದರು.