ರಸಪ್ರಶ್ನೆ ಕಾರ್ಯಕ್ರಮದ ಸಮಾರಂಭದಲ್ಲಿ ಡಾ.ಚಿದಾನಂದ ಗೌಡ ಮಾಹಿತಿ
ಕುಶಾಲನಗರ : ಕುವೆಂಪುರವರ ಉದಯರವಿ ಮನೆಯನ್ನು ಸಂಗ್ರಹಾಲಯ ಮಾಡುವ ಬಗ್ಗೆ ಚಿಂತನೆ ನಡೆಸಿದ್ದು, ಕುಪ್ಪಳ್ಳಿಯಲ್ಲಿರುವ ಮನೆಯಂತೆ ಮೈಸೂರಿನಲ್ಲಿಯೂ ಕೂಡ ಉದಯರವಿ ಎಂಬ ಕುವೆಂಪುರವರ ಮನೆಯನ್ನು ಸಂಗ್ರಹಾಲಯವನ್ನಾಗಿ ಮಾಡಿ ಅಲ್ಲಿ ಅವರು ಬಳಸುತ್ತಿದ್ದ ಪುಸ್ತಕಗಳ ಪ್ರತಿ, ಹಲವಾರು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಇದು 2026ರ ಡಿ.29ರಂದು ಪ್ರಾರಂಭವಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ ತಿಳಿಸಿದರು.
ಕೊಡಗು ವಿಶ್ವವಿದ್ಯಾಲಯದ ಕಾವೇರಿ ಆವರಣದ ಹಾರಂಗಿ ಸಭಾಂಗಣದಲ್ಲಿ ಕನ್ನಡಸಿರಿ ಸ್ನೇಹ ಬಳಗ, ಹಾಗೂ ನಾಡಪ್ರಭು ಪತ್ತಿನ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವಮಾನವ ಕುವೆಂಪುರವರ ಜನ್ಮೋತ್ಸವ ಮತ್ತು-ಸಮಗ್ರ ಸಾಹಿತ್ಯದ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಹಾಗೂ ರಸಪ್ರಶ್ನೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ಪಂಪ ಹೇಳಿದಂತೆ ಮಾನವ ಕುಲಂ ತಾನೊಂದೆ ವಲಂ ಎಂಬ ತತ್ವದ ಅಡಿಯಲ್ಲಿ ಜಾತಿ, ಧರ್ಮ, ಭಾಷೆಗಳ ಬೇಲಿಯನ್ನು ಕಳಚಿ ಪ್ರತಿಯೊಬ್ಬರೂ ಸಂಕುಚಿತ ಮನೋಭಾವನೆಯಿಂದ ಹೊರಬರಬೇಕು. ಮಂತ್ರ ಮಾಂಗಲ್ಯ ಪರಿಕಲ್ಪನೆಯು ಕುವೆಂಪುರವರು ಹಿಂದೂ ವಿವಾಹಕ್ಕೆ ನೀಡಿದ ಸರಳ ವಿವಾಹ ಪದ್ಧತಿಯಾಗಿದೆ. ಇಂದಿನ ಸಮಾಜದಲ್ಲಿ ಪೋಷಕರು ಆಡಂಬರದ ವಿವಾಹಕ್ಕೆ ಸಿಲುಕಿ ತಮ್ಮ ಜೀವನವನ್ನು ಸಾಲದ ಕೂಪಕ್ಕೆ ಸಿಲುಕಿಸಿಕೊಳ್ಳುತ್ತಿದ್ದಾರೆ. ಅಂತವರಿಗೆ ಈ ಪರಿಕಲ್ಪನೆಯು ಒಂದು ಉತ್ತಮ ವಿಧಾನವಾಗಿದೆ ಎಂದರು.
ಶ್ರೀ ರಾಮಾಯಣ ದರ್ಶನಂ ಆಧುನಿಕ ಕಾಲದಲ್ಲಿನ ಮಹಾಕಾವ್ಯದ ವೈಶಿಷ್ಟತೆಯು ಮೂಲ ರಾಮಾಯಣಕ್ಕಿಂತ ವಿಭಿನ್ನ ಮತ್ತು ವಿಶೇಷವಾಗಿದೆ. ರಾಮನ ಆದರ್ಶಗಳು ಎದ್ದು ಕಾಣುತ್ತದೆ. ಕುವೆಂಪು ತಮ್ಮ ಸಾಹಿತ್ಯದಲ್ಲಿ ಕಾಡಿನ ಮೇಲೆ ಇದ್ದಂತಹ ಪ್ರೀತಿಯನ್ನು ಮತ್ತು ಆಸಕ್ತಿಯನ್ನು ತೋರ್ಪಡಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಮಾತನಾಡಿ, ಕುವೆಂಪು ಅವರ ಕಾವ್ಯದಲ್ಲಿ ವಿಶ್ವಮಾನವತಾವಾದ, ಆತ್ಮಶೋಧ, ಮನಸ್ಸಿನ ಅಂತರಂಗ, ಪ್ರಕೃತಿ-ಮಾನವ-ದೇವತೆಗಳ ಆಂತರಿಕ ಸಂಬಂಧದ ಸೂಕ್ಷ್ಮತೆ, ಭಾರತೀಯ ದಾರ್ಶನಿಕ ಪರಂಪರೆಯ ಸಂಧಾನಕ್ಕೆ ಅನುವು ಮಾಡಿಕೊಟ್ಟಿರುವುದನ್ನು ಕಾಣಬಹುದಾಗಿದೆ ಎಂದರು.





