Mysore
23
broken clouds
Light
Dark

ಕೃಷಿ ಇಲಾಖೆ ಅಧಿಕಾರಿಗಳಿಂದ ವ್ಯಾಪಕ ಪ್ರಚಾರ: ಕೊಡಗಿನಲ್ಲಿ ಬೆಳೆ ವಿಮೆಯ ವ್ಯಾಪ್ತಿಗೆ 595 ರೈತರು

ಮಡಿಕೇರಿ: ಕಳೆದ ವರ್ಷಕ್ಕೆ ಹೋಲಿಸಿದರೆ ಕೊಡಗಿನಲ್ಲಿ ಈ ವರ್ಷ ಅತಿ ಹೆಚ್ಚು ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ.

ಕಳೆದ ವರ್ಷ ರಾಜ್ಯದೆಲ್ಲೆಡೆ ತೀವ್ರ ಬರ ಆವರಿಸಿತ್ತು. ಪರಿಣಾಮ ಜಮೀನಿನಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗಿದ್ದವು. ಈ ಹಿನ್ನೆಲೆಯಲ್ಲಿ ಈ ವರ್ಷವೂ ಬರ ಬಂದರೆ ಸಮಸ್ಯೆಯಾಗುತ್ತದೆ ಎಂದು ಭಾವಿಸಿದ ರೈತರು, ಬೆಳೆ ವಿಮೆ ಮಾಡಿಕೊಂಡಿದ್ದಾರೆ.

ಈ ಮೂಲಕ ಕೃಷಿ ಇಲಾಖೆ ಅಧಿಕಾರಿಗಳು ನಡೆಸಿದ ವ್ಯಾಪಕ ಪ್ರಚಾರದಿಂದಾಗಿ ಬೆಳೆ ವಿಮೆ 500ರ ಗಡಿ ದಾಟಿದೆ. ವಿವಿಧ ಜಿಲ್ಲೆಗಳಲ್ಲಿ ಬೆಳೆ ವಿಮೆ ಜನಪ್ರಿಯವಾಗುತ್ತಿತ್ತು. ಆದರೆ, ಕೊಡಗಿನಲ್ಲಿ ಮಾತ್ರ ಪ್ರತಿ ವರ್ಷವೂ ಬೆಳೆ ವಿಮೆಗೆ ರೈತರು ನಿರಾಸಕ್ತಿ ತೋರುತ್ತಿದ್ದರು.

ಆದರೆ ಕಳೆದ ವರ್ಷ ಮಳೆ ಕಡಿಮೆಯಾದ ಪರಿಣಾಮ ರೈತರೆಲ್ಲಾ ಬೆಳೆ ವಿಮೆಯತ್ತ ಮುಖ ಮಾಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಭತ್ತ ಹಾಗೂ ಮುಸುಕಿನ ಜೋಳವನ್ನು ಅತಿಹೆಚ್ಚು ಬೆಳೆಯಲಾಗುತ್ತಿದ್ದು, ಈ ಬೆಳೆಗಳಿಗೆ ರೈತರೆಲ್ಲಾ ವಿಮೆ ಮಾಡಿಸಿದ್ದಾರೆ.

ಈ ಮೂಲಕ ಫಸಲು ನಷ್ಟವಾದರೆ ಸರ್ಕಾರದಿಂದ ಬೆಳೆಗೆ ಇಂತಿಷ್ಟು ಪರಿಹಾರ ಬರುತ್ತದೆ ಎಂದು ಅಂದಾಜಿಸಲಾಗಿದ್ದು, ಈ ಬಾರಿ ಮಳೆಯೂ ಕೂಡ ಉತ್ತಮವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ತರಿಸಿದೆ.