ಕೊಡಗು: ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಗೆ ವಿರೋಧ ವ್ಯಕ್ತಪಡಿಸಿ ಮಾಲ್ದಾರೆ ಗ್ರಾಮ ಪಂಚಾಯಿತಿ ಮುಂದೆ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ಸ್ಥಳಕ್ಕೆ ಸಂಸದ ಯದುವೀರ್ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ್ದಾರೆ.
ವೀರಾಜಪೇಟೆ ತಾಲ್ಲೂಕಿನ, ಮಾಲ್ದಾರೆ ಗ್ರಾಮ ಪಂಚಾಯಿತಿ ಚೊಟ್ಟೆಪಾಳಿ (ಕಲ್ಲಳ್ಳ) ಜಾಗದ ಸುತ್ತಮುತ್ತಲಿನಲ್ಲಿ ಹಲವು ಕುಟುಂಬಗಳು ವಾಸವಾಗಿದ್ದು, ಆ ಜಾಗವನ್ನು ಕಸ ವಿಲೇವಾರಿ ಮಾಡಲು ಗುರುತಿಸಿಲಾಗಿದೆ.
ಇದರಿಂದ ಜನರು ಆಕ್ರೋಶಗೊಂಡು ಕಳೆದ ಐದು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಯಾವುದೇ ಅಧಿಕಾರಿಗಳು ಸ್ಪಂದಿಸದೇ ಅಸಹಾಯಕತೆ ತೋರುತ್ತಿರುವುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ. ಬೇಡಿಕೆ ಈಡೇರುವರೆಗೂ ಹೋರಾಟ ಮುಂದುವರಿಸುವುದಾಗಿ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ಎಚ್ಚರಿಸಿದ್ದಾರೆ.
ಸಂಸದ ಯದುವೀರ್ ಒಡೆಯರ್ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಹೋರಾಟದ ಸಮಸ್ಯೆಗಳನ್ನು ಆಲಿಸಿದರು. ನಂತರ ತ್ಯಾಜ್ಯ ವಿಲೇವಾರಿಗೆ ನಿಗದಿಯಾಗಿರುವ ಸ್ಥಳ ಪರಿಶೀಲನೆ ಮಾಡಿ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ನಂತರ ಮಾತನಾಡಿದ ಅವರು, ಜನವಸತಿ ಪ್ರದೇಶ ತೊಡು ನೀರು ಹರಿಯುವ ಸ್ಥಳ, ಸೆರಿದಂತೆ ಹಲವು ಕಾರಣಗಳಿದ್ದು ತ್ಯಾಜ್ಯ ವಿಲೇವಾರಿಗೆ ಸೂಕ್ತವಾದದ್ದಲ್ಲ. ನಿಯಮಗಳನ್ನ ಮೀರಿ ಮಾಡುವುದು ಸರಿಯಲ್ಲ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಶೀಲನೆಗೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭ ಭೀಮಪುತ್ರಿ ಬ್ರಿಗೇಡ್ ಸಂಘಟನೆಯ ರಾಜ್ಯಾಧ್ಯಕ್ಷ ರೇವತಿ ರಾಜ್, ಬಹುಜನ ಭಾಗ್ಯವಿಧಾತಾ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷ ಚೇತನ್ ಕುಮಾರ್, ಬಿಎಸ್ಪಿ ಉಸ್ತುವಾರಿ ಕಳ್ಳಿರ ಸುರೇಶ್, ಖಜಾಂಚಿ ಸರ ತಂಗಮ್ಮ, ಅಧ್ಯಕ್ಷರು ಉಮೇಶ್ ಉತ್ತಯ್ಯ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.