ಕುಶಾಲನಗರ : ಪುರಸಭೆ ವ್ಯಾಪ್ತಿಯ ಗಂಧದಕೋಟೆ ಗ್ರಾಮದ ಬಡಾವಣೆಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಈ ಬಡಾವಣೆಯು ಎರಡು ದಶಕದಿಂದ ಮೂಲಸೌಕರ್ಯಗಳಾದ ರಸ್ತೆ, ಒಳಚರಂಡಿ ಹಾಗೂ ಬೀದಿದೀಪಗಳಿಂದ ವಂಚಿತವಾಗಿದೆ. ಮೈಸೂರು- ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವ ಬಡಾವಣೆ ಹೋಗಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಈಗಿರುವ ರಸ್ತೆ ತುಂಬ ಕಿರಿದಾಗಿದ್ದು, ವಾಹನ ಓಡಾಡಲು ಸಾಧ್ಯವಿಲ್ಲ ಪರಿಸ್ಥಿತಿ ಇದೆ. ಇಲ್ಲಿನ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಅವರನ್ನು ಆಸ್ಪತ್ರೆಗೆ ಸಾಗಿಸಲು ತುಂಬ ಕಷ್ಟಪಡಬೇಕಾಗಿದೆ.
ಅಲ್ಲದೇ ಮನೆಗೆ ಯಾವುದೇ ವಸ್ತುಗಳನ್ನು ವಾಹನಗಳಲ್ಲಿ ಸಾಗಾಟ ಮಾಡಲು ಆಗದಂತ ಸ್ಥಿತಿ ಇದೆ. ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡು ವ್ಯಕ್ತಿಯೊಬ್ಬರು ತಮ್ಮ ಜಾಗಕ್ಕೆ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ ಎಂದು ನಿವಾಸಿ ಎನ್.ರವೀಂದ್ರ ಹಾಗೂ ಪುಷ್ಪಾ ದೂರಿದ್ದಾರೆ. ಇಲ್ಲಿನ ಸಮಸ್ಯೆಗಳಿಂದ ನಿತ್ಯನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳು ತಮ್ಮ ಬಡಾವಣೆಗೆ ಹೋಗುವ ರಸ್ತೆಯಲ್ಲಿ ಚುನಾವಣೆಯನ್ನು ಬಹಿಷ್ಕರಿಸಲಾಗಿದ್ದು, ಯಾವುದೇ ಪಕ್ಷಗಳ ನಾಯಕರು ನಮ್ಮ ಬಡಾವಣೆಗೆ ಬರಬಾರದು ಎಂದು ಬ್ಯಾನರ್ ಅಳವಡಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಬಡಾವಣೆಯ ನಿವಾಸಿಗಳಾದ ಚಂದ್ರೇಶ್, ನಾಗಮ್ಮ, ಲಕ್ಷ್ಮಿ, ಎಸ್.ಮಣಿ ಸೇರಿದಂತೆ 25 ಮಂದಿ ಸಹಿ ಮಾಡಿರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಮೂಲಕ ತಮ್ಮ ನೋವು ತೊಡಗಿಕೊಂಡಿದ್ದಾರೆ.





