Mysore
20
overcast clouds
Light
Dark

ಪರಿಹಾರ ನೀಡಲು ವಿಳಂಬ : ನ್ಯಾಯಾಲಯದಿಂದ ಕೆಎಸ್​ಆರ್​ಟಿಸಿ ಬಸ್​ ಜಪ್ತಿ

ಕೊಡಗು : ಅಪಘಾತ ವಿಮೆ ಪರಿಹಾರ ನೀಡುವಲ್ಲಿ ಕೆಎಸ್​ಆರ್​ಟಿಸಿ ಸಂಸ್ಥೆ ವಿಫಲವಾದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಅನ್ನು ನ್ಯಾಯಾಲಯ ಜಪ್ತಿ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ. ಇಲ್ಲಿನ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಬಸ್​ ಅನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. 2010ರಲ್ಲಿ ವಿರಾಜಪೇಟೆ ನಗರದ ನಿವಾಸಿ ಮುನಾವರ್ ತಮ್ಮ ಕುಟುಂಬದವರೊಂದಿಗೆ ಸ್ಯಾಂಟ್ರೋ ಕಾರಿನಲ್ಲಿ ಮೈಸೂರಿಗೆ ತೆರಳುತ್ತಿದ್ದರು. ಈ ಸಂದರ್ಭ ಹುಣಸೂರು ತಾಲ್ಲೂಕಿನ ಕಲ್ಲಬೆಟ್ಟ ಬಳಿ ಎದುರಿನಿಂದ ವೇಗವಾಗಿ ಬಂದ ಕೆಎಸ್​ಆರ್​ಟಿಸಿ ಬಸ್​ ಕಾರಿಗೆ ಬಲವಾಗಿ ಅಪ್ಪಳಿಸಿತ್ತು. ಪರಿಣಾಮ ಮುನಾವರ್​ ಸಾವನ್ನಪ್ಪಿದ್ದರು.

ಅಪಘಾತದ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಮುನಾವರ್​ ಕುಟುಂಬಕ್ಕೆ ಕೆಎಸ್​ಆರ್​ಟಿಸಿ ಪರಿಹಾರವನ್ನೂ ನೀಡಿತ್ತು. ಆದರೆ ಸಂಪೂರ್ಣ ಜಖಂಗೊಡಿದ್ದ ಕಾರಿಗೂ ವಿಮಾ ಪರಿಹಾರ ಹಣ ನೀಡುವಂತೆ ಮುನಾವರ್ ಪತ್ನಿ ಫಾತಿಮಾ ಅಫ್ಸರ್​ ವಿರಾಜಪೇಟೆ ಹೆಚ್ಚುವರಿ ಸೆಷನ್ಸ್​ ನ್ಯಾಲಾಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರರಿಗೆ ವಿಮಾ ಪರಿಹಾರ ಹಣ ರೂ 1,48,130 ಪಾವತಿಸುವಂತೆ ಆದೇಶ ಮಾಡಿತ್ತು.

ಇದನ್ನು ಪ್ರಶ್ನಿಸಿ ಕೆಎಸ್​ಆರ್​ಟಿಸಿ, ಹೈಕೋರ್ಟ್​ ಮೊರೆ ಹೋಗಿತ್ತು. ಆದರೆ ಹೈಕೋರ್ಟ್​ ಕೆಎಸ್​ಆರ್​ಟಿಸಿ ಅರ್ಜಿಯನ್ನು ತಳ್ಳಿಹಾಕಿದ್ದು, ನ್ಯಾಯಾಲಯದ ಆದೇಶ ಪಾಲಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ವಿರಾಜಪೇಟೆ ನ್ಯಾಯಾಲಯ 2021ರ ಮಾರ್ಚ್​ನಲ್ಲಿ ಅಪಘಾತ ಪರಿವಹಾರ ವಿಮಾ ಹಣ ಪಾವತಿಸುವಂತೆ ಸಾರಿಗೆ ನಿಗಮಕ್ಕೆ ಬಹಳಷ್ಟು ಬಾರಿ ಸೂಚಿಸಿತ್ತು. ಆದರೂ ನಿಗಮ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿತ್ತು.

ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಹೆಚ್ಚುವರಿ ನ್ಯಾಯಾಲಯ ಇದೀಗ ಸಾರಿಗೆ ಬಸ್​ ಅನ್ನೇ ಜಪ್ತಿ ಮಾಡುವಂತೆ ಆದೇಶ ಮಾಡಿತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ವಿರಾಜಪೇಟೆ ಬಸ್​ ನಿಲ್ದಾಣಕ್ಕೆ ತೆರಳಿ ಪ್ರಕರಣಕ್ಕೆ ಸಂಬಂಧಪಟ್ಟ ಕೊಳ್ಳೇಗಾಲ ಡಿಪೋಕ್ಕೆ ಸೇರಿದ ಬಸ್​ ಅನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಪರವಾಗಿ ವಿರಾಜಪೇಟೆ ವಕೀಲ ಟಿಪಿ ಕೃಷ್ಣ. ರಾಕೇಶ್ ಹಾಗೂ ಸಿ. ದರ್ಶನ್​ ವಾದ ಮಂಡಿಸಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ