ಗೋಣಿಕೊಪ್ಪ: ಕೊಡಗಿಗೆ ಪ್ರವಾಸಕ್ಕೆ ಬಂದ ಪ್ರವಾಸಿಗರ ಕಾರು ಚಾಲಕನ ನಿಯಂತ್ರಣ ತಪ್ಪಿ ಮನೆಯ ಅಂಗಳಕ್ಕೆ ಉರುಳಿ ಬಿದ್ದ ಘಟನೆ ಶನಿವಾರ ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಹುದಿಕೇರಿ ಮಾರ್ಗವಾಗಿ ಸಂಚರಿಸಿ ಇರ್ಪುಫಾಲ್ಸ್ ಸೌಂದರ್ಯವನ್ನು ಸವಿದು ಕೇರಳದ ವೈನಾಡಿಗೆ ಪ್ರವಾಸ ಯಾತ್ರೆ ರೂಪಿಸಿಕೊಂಡು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಹುದಿಕೇರಿಯ ಗ್ರಾಮದ ಸೆವೆನ್ತ್ ಮೈಲ್ನ ಮಲ್ಲಂಡ ಯತೀಶ್ ಅವರ ಮನೆಯ ಅಂಗಳಕ್ಕೆ ಕಾರು ಮಗುಚಿಕೊಂಡಿದೆ.
ಕಾರಿನಲ್ಲಿ ಮೂರು ಯುವಕರು ಮತ್ತು ಮಹಿಳೆ ಸರಿ ನಾಲ್ಕು ಜನ ಪ್ರಯಾಣಿಸುತ್ತಿದ್ದರು. ಸಣ್ಣಪುಟ್ಟ ಗಾಯಗಳಿಂದ ಪ್ರವಾಸಿಗರು ಪಾರಾಗಿದ್ದಾರೆ. ಮಲ್ಲಂಡ ಯತೀಶ್ ಅವರ ಮನೆಯ ಗೋಡೆ ಕಾರು ಅಪ್ಪಳಿಸಿದ ರಭಸಕ್ಕೆ ಬಿರುಕು ಬಿಟ್ಟಿದೆ.
ಸ್ಥಳೀಯ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.
ಹುದಿಕೇರಿ ಸೆವೆನ್ತ್ ಮೈಲ್ನಲ್ಲಿ ಮಲ್ಲಂಡ ಯತೀಶ್ ಅವರ ಮನೆ ಇದ್ದು, ರಸ್ತೆ ತಿರುವು ಇರುವುದರಿಂದ ವಾಹನಗಳು ನಿಯಂತ್ರಣ ಕಳೆದುಕೊಂಡು ಮನೆಯಂಗಳಕ್ಕೆ ನುಗ್ಗುವ ಅಪಾಯಕಾರಿ ಸದಾ ಎದುರಾಗುತ್ತಿರುತ್ತದೆ. ಹೀಗಾಗಿ, ಈ ಭಾಗದಲ್ಲಿ ಬ್ಯಾರಿಕೆಟ್ ಅಳವಡಿಸಲು ಹಲವು ಬಾರಿ ಪಂಚಾಯಿತಿಗೆ ಮನವಿ ಮಾಡಿದರು ಸ್ಪಂದಿಸಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.





