ನಾಪೋಕ್ಲು : ದ್ವಿಚಕ್ರ ವಾಹನವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಚೈಯಂಡಾಣೆಯ ನರಿಯಂದಡ ಗ್ರಾಮದಲ್ಲಿ ಜರುಗಿದೆ.
ಸ್ಥಳೀಯ ಆಶಾ ಕಾರ್ಯಕರ್ತೆ ಗೀತಾ ತಮ್ಮ ಸ್ಕೂಟಿಯಲ್ಲಿ ಆಶಾ ಕಾರ್ಯಕರ್ತೆ ರಮ್ಯ ಅವರ ಜೊತೆ ಚೈಯಂಡಾಣೆಯಲ್ಲಿ ಸಂಘಕ್ಕೆ ಸಂಬಂಧಿಸಿದ ಸಭೆ ಮುಗಿಸಿ ನಾಪೋಕ್ಲುವಿಗೆ ಹಿಂತಿರುಗುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಗೀತಾ ಚಲಾಯಿಸುತ್ತಿದ್ದ ಸ್ಕೂಟಿ ಚೈಯಂಡಾಣೆಯ ನರಿಯಂದಡ ಗ್ರಾಮದ ಇಳಿಜಾರು ರಸ್ತೆಯಲ್ಲಿ ಸಂಚರಿಸುತ್ತಿರುವ ಸಂದರ್ಭ ಆಕಸ್ಮಿಕವಾಗಿ ಸ್ಕೂಟಿಯಲ್ಲಿ ಹೋಗೆ ಕಾಣಿಸಿಕೊಂಡಿದೆ.
ಕೂಡಲೇ ಸ್ಕೂಟಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಕಾರಣ ಯಾವುದೇ ಜೀವ ಅಪಾಯ ಸಂಭವಿಸಿಲ್ಲ. ಬೆಂಕಿ ನಂದಿಸಲು ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗದೆ ನೋಡನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಸ್ಕೂಟಿ ಸಂಪೂರ್ಣ ಸುಟ್ಟು ಕರಕಲಾಗಿ ಬಾರಿ ನಷ್ಟ ಸಂಭವಿಸಿದೆ.
ಈ ಬಗ್ಗೆ ಗೀತಾ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಸ್ಥಳವನ್ನು ಪರಿಶೀಲಿಸಿ ಕಾನೂನಿನ ಕ್ರಮ ಕೈಗೊಂಡಿದ್ದಾರೆ.





