ಕೆ. ಆರ್ ನಗರದ ಮುಳ್ಳೂರು ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ ಸೆರೆ
ಮೈಸೂರು: ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಮುಳ್ಳೂರು ರಸ್ತೆಯಲ್ಲಿ ಚಿರತೆಯೊಂದು ಬೈಕ್ ಸವಾರನ ಮೇಲೆ ದಾಳಿ ಮಾಡಿದೆ. ಈ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕಳೆದ ರಾತ್ರಿ ಪಟ್ಟಣದ ಸ್ಟೇಡಿಯಂ ಬಳಿ ಹಾಗೂ ಮುಳ್ಳೂರು ರಸ್ತೆಯಲ್ಲಿ ಕಾಣಿಸಿ ಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯಲು ಶುಕ್ರವಾರ ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿ ಕಾರ್ಯಾಚರಣೆ ನಡೆಸಿದ್ದರು.ಈ ವೇಳೆ ತಪ್ಪಿಸಿಕೊಳ್ಳಲು ಓಡುತ್ತಿದ್ದ ಚಿರತೆ ರಾಜ್ ಪ್ರಕಾಶ್ ವಿದ್ಯಾಸಂಸ್ಥೆಯ ಬಳಿ ಬೈಕ್ ನಲ್ಲಿ ಹೋಗುತ್ತಿದ್ದ ಸವಾರನ ಮೇಲೆ ಎರಗಿದೆ.
ಚಿರತೆ ದಾಳಿಗೆ ಹೆದರಿದ ಬೈಕ್ ಸವಾರ ದ್ವಿಚಕ್ರ ಸಮೇತ ರಸ್ತೆಗೆ ಉರುಳಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. ಹುಣಸೂರು, ಮೈಸೂರು ಭಾಗದ ಅರಣ್ಯಾಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬೋನಿಗೆ ಬಿದ್ದ ಚಿರತೆಗೆ ಪಶುವೈದ್ಯ ಇಲಾಖೆಯ ಡಾ.ಮಂಜುನಾಥ್ ಅವರು ಅರಿವಳಿಕೆ ಚುಚ್ಚು ಮದ್ದು ನೀಡಿ ಸಾಗಾಟಕ್ಕೆ ಸಹಕರಿಸಿದರು.





