ಮೈಸೂರು: ಜಾರ್ಖಂಡ್ ರಾಜ್ಯದ ಗಿರಿಡಿ ಜಿಲ್ಲೆಯಲ್ಲಿರುವ ಜೈನರ ಪವಿತ್ರ ಪ್ರಾಚೀನ ತೀರ್ಥಂಕರರ ಮೋಕ್ಷ ತಾಣವಾದ ಶ್ರೀ ಸಮ್ಮೇದ ಶಿಖರ್ಜಿಯನ್ನು ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣಕ್ಕೆ ಅನುಮತಿ ನೀಡಿರುವುದನ್ನು ರದ್ದುಪಡಿಸಬೇಕು ಎಂದು ಮೈಸೂರಿನ ಶ್ರೀ ದಿಗಂಬರ ಜೈನ ಸಮಾಜ ಆಗ್ರಹಿಸಿದೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಎಸ್.ಡಿ.ಮಹೇಶ್ ಪ್ರಸಾದ್, ಅಹಿಂಸಾ ತತ್ವವನ್ನು ಸಾರಿದ ಜೈನಧರ್ಮದ ೨೪ ತೀರ್ಥಂಕರರ ಲ್ಲಿ ೨೦ ತೀರ್ಥಂಕರರು ತಮ್ಮ ಕೋಟ್ಯಂತರ ಮುನಿ ಸಂಘಗಳ ಜತೆ ಮೋಕ್ಷ ಪಡೆದಂತಹ ಅತ್ಯಂತ ಪ್ರಾಚೀನ ಹಾಗೂ ಪವಿತ್ರ ಸ್ಥಳವೇ ಶ್ರೀ ಸಮ್ಮೇದ ಶಿಖರ್ಜಿ. ಈ ಪವಿತ್ರ ತಾಣವನ್ನು ಪ್ರವಾಸಿ ತಾಣ ವಾಗಿಸಲು ಅನುಮತಿ ನೀಡಿರುವುದು ಸರಿಯಲ್ಲ. ಕೂಡಲೇ ಜಾರ್ಖಂಡ್ ರಾಜ್ಯ ಸರ್ಕಾರ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಶ್ರೀ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವಾಗಿ ಮಾಡಲು ಹೊರಟಿರುವುದನ್ನು ಖಂಡಿಸಿ ನಗರದ ಗಾಂಧಿ ವೃತ್ತದಲ್ಲಿ ಡಿ.೧೯ರಂದು ಬೆಳಿಗ್ಗೆ ೧೦ರಿಂದ ೧೧ ಗಂಟೆಯವರೆಗೆ ಮೌನ ಪ್ರತಿಭಟನೆ ಮಾಡಿ ನಂತರ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಮಾಜದ ಉಪಾಧ್ಯಕ್ಷ ಭರತ್ ರಾಜ್, ಕಾರ್ಯದರ್ಶಿ ಸುನಿಲ್ ಕುಮಾರ್, ಮಹಿಳಾ ಅಧ್ಯಕ್ಷರಾದ ಲತಾ ಸುದರ್ಶನ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.





