Mysore
20
overcast clouds
Light
Dark

ಕಾರಾಗೃಹಗಳು ಮನಃ ಪರಿವರ್ತನೆ ಮಾಡುವ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ : ದಿನೇಶ್ ಬಿ ಜಿ

ಮೈಸೂರು :  ಕಾನೂನಿನ ಮುಖ್ಯ ಉದ್ದೇಶ ಮನಃ ಪರಿವರ್ತನೆ ಮಾಡುವುದು. ಕಾರಾಗೃಹಗಳು ಮನಃ ಪರಿವರ್ತನೆ ಮಾಡುವ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಿನೇಶ್ ಬಿ.ಜಿ ಅವರು ತಿಳಿಸಿದರು.

ಇಂದು ನಗರದ ಕೇಂದ್ರ ಕಾರಾಗೃಹದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ, ಕೇಂದ್ರ ಕಾರಾಗೃಹ ಮೈಸೂರು, ಸಂಚಲನ ರಂಗ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಕಾರಾಗೃಹದ ಬಂದಿ ನಿವಾಸಿಗಳಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಕರ್ಣಾತರಂಗ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಪ್ಪುಗ ಳು ತಾವು ಕೋಪಕ್ಕೆ ಬುದ್ದಿ ಕೊಟ್ಟು ಆಗಿರುತ್ತವೆ. ತಾವು ಯಾವುದೋ ಸನ್ನಿವೇಶದಲ್ಲಿ ಪ್ರಕೋಪಕ್ಕೆ ಒಳಗಾಗಿ ತಪ್ಪು ಮಾಡಿರುತ್ತಿರಿ. ಅದನ್ನು ತಿದ್ದಿಕೊಂಡು ಬದುಕಿ. ನಾಟಕ ಕಲೆಗಳು ಮನಃ ಪರಿವರ್ತನೆಗೆ ಉತ್ತಮ ಮದ್ದುಗಳು. ಮುಂದಿನ ದಿನಗಳಲ್ಲಿ ತಾವು ಬದಲಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಜೀವನ ನಡೆಸಿ ಎಂದು ತಿಳಿಸಿದರು.

ದಕ್ಷಿಣ ವಲಯ ಕಾರಾಗೃಹಗಳ ಮಹಾ ನಿರೀಕ್ಷಕರಾದ ಸೋಮಶೇಖರ್ ಅವರು ಮಾತನಾಡಿ ಕಾರಾಗೃಹ ನಿವಾಸಿಗಳಿಗೆ ಈ ರೀತಿ ನಾಟಕಗಳು ಕಲೆಯಲ್ಲಿ ತೊಡಗಿಸುವುದರಿಂದ ಅವರ ಮನಃ ಪರಿವರ್ತನೆ ಸಾಧ್ಯವಾಗುತ್ತದೆ. ಕಾರಾಗೃಹದ ಬಂದಿ ನಿವಾಸಿಗಳಲ್ಲಿ ವಿವಿಧ ಕಲೆಗಳಲ್ಲಿ ಪ್ರತಿಭಾನ್ವಿತ ವ್ಯಕ್ತಿಗಳು ಇದ್ದಾರೆ ಎಂದು ತಿಳಿಸಿದರು.

ಕಾರಾಗೃಹದ ಮುಖ್ಯ ಅಧೀಕ್ಷಕರಾದ ಪಿ.ಎಸ್ ರಮೇಶ್ ಅವರು ಮಾತನಾಡಿ ಮೈಸೂರು ಸಾಂಸ್ಕೃತಿಕ ನಗರಿ. ಕಲೆ ಸಂಸ್ಕೃತಿಯ ತವರೂರು. ಕನ್ನಡ ಅಕ್ಷರ ಬರಹ ಓದಲು ಬರೆಯಲು ಬರದವರು ಸಹ ನಾಟಕದಲ್ಲಿ ಪಾತ್ರದಾರಿಗಳಾಗಿ ಭಾಗವಹಿಸಿದ್ದಾರೆ. ಮೂರು ತಿಂಗಳ ಕಾಲ ನಿರಂತರವಾಗಿ ಅಭ್ಯಾಸ ಮಾಡಿ ಇಂದು ನಾಟಕ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಚಲನ ರಂಗಸoಸ್ಥೆಯ ಅಧ್ಯಕ್ಷರಾದ ದೀಪಕ್ ಅವರು ಮಾತನಾಡಿ ಕಾರಾಗೃಹದ ನಿವಾಸಿಗಳಿಗೆ ಕನ್ನಡ ವರ್ಣಮಾಲೆಯಿಂದ ಕಲಿತು ನಾಟಕ ಮಾಡುವ ಹಂತಕ್ಕೆ ಬೆಳೆಸಲಾಗಿದೆ.

ಯಾವುದೇ ಮನುಷ್ಯ ಕಲೆ ಸಾಹಿತ್ಯ ಸಂಸ್ಕೃತಿ ಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಅವರು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ. ತಪ್ಪು ಮಾಡಿರುವ ನೀವು ಅದನ್ನು ತಿದ್ದಿಕೊಂಡು ನಡೆಯಬೇಕು.

ತಾವು ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಜೀವನ ನಡೆಸಬೇಕು. ಮನುಷ್ಯ ಬದಲಾಗಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಾರಾಗೃಹದ ಅಧೀಕ್ಷಕರಾದ ಪಿ. ಮಹಾದೇವನಾಯ್ಕ, ಸೈಕಲ್ ಅಗರಬತ್ತಿ ಸಂಸ್ಥೆಯ ಹರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ